ಮಲೆನಾಡಿನಲ್ಲಿ
ಆನೆ ಓಡಾಟದ ಹಿಂದೆ…
ಮಲೆನಾಡಿನ ಶೃಂಗೇರಿ ಕೊಪ್ಪ ಭಾಗಗಳಲ್ಲಿ ಮೊದಲೆಲ್ಲಾ ಆನೆ ಓಡಾಟ ಇರಲಿಲ್ಲ. ಈಗದು ಶುರುವಾಗಿ ಒಂದೆರಡು ವರುಷ ಆಗಿದೆ. ಆನೆಯ ಕಾರಣದಿಂದ ಪ್ರಾಣಹಾನಿ ಬೆಳೆಹಾನಿಗಳಾಗತೊಡಗಿವೆ.
ಈ ನೆಪ ಹಿಡಿದು ನಮಗೆ ಪರಿಹಾರ ಕೊಡಿ ನಾವು ಒಕ್ಕಲೆದ್ದು ಹೋಗುತ್ತೇವೆ ಎಂದು ಆಗ್ರಹಿಸಿ ಹೋರಾಟದ ಪ್ರಹಸನವನ್ನೂ ಕೂಡ ಕೆಲವು ಶಕ್ತಿಗಳು ಮಾಡಿದವು.
ಜನವಿರೋಧಿ ಹಾಗೂ ಪರಿಸರ ವಿರೋಧಿ ಅರಣ್ಯ ಯೋಜನೆಗಳು ಹಾಗೂ ಒಕ್ಕಲೆಬ್ಬಿಸುವುದರ ವಿರುದ್ಧ ಕೆಲವು ದಶಕಗಳಿಂದ ದಿಟ್ಟ ಹಾಗೂ ರಾಜಿರಹಿತ ಹೋರಾಟಗಳನ್ನು ಮಾಡುತ್ತಾ ಬಂದ ಆದಿವಾಸಿಗಳು ಇನ್ನಿತರ ಜನಸಮೂಹಗಳು ವಾಸ ಮಾಡುತ್ತಿರುವ ಪ್ರದೇಶವಿದು ಎನ್ನೋದನ್ನು ಇಲ್ಲಿ ಗಮನಿಸಬೇಕು. ಇದಾಗಿ ಕೆಲವು ದಿನಗಳ ನಂತರ ಹತ್ತಾರು ವರುಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಸುಮಾರು ಎರಡು ಏಕರೆಯಷ್ಟು ತೋಟವನ್ನು ಅರಣ್ಯ ಇಲಾಖೆ ಕಡಿದು ನಾಶ ಮಾಡಿ ಕಾಡುಗಿಡಗಳನ್ನು ನೆಟ್ಟು ಆ ಕುಟುಂಬವನ್ನು ಬಲ ಪ್ರಯೋಗಿಸಿ ಒಕ್ಕಲೆಬ್ಬಿಸಿರುವ ಘಟನೆ ಶೃಂಗೇರಿ ಕಡೆಯಿಂದ ವರದಿಯಾಗಿದ್ದನ್ನು ಗಮನಿಸಬಹುದು.
ಮಲೆನಾಡಿನಲ್ಲಿ ಹುಲಿಗಳು ಇರಲಿಲ್ಲ. ಈಗ ಹುಲಿಗಳು ಕಾಣತೊಡಗಿವೆ. ದನಕರುಗಳನ್ನು ತಿನ್ನತೊಡಗಿವೆ. ಚಾಮರಾಜನಗರ ಭಾಗದಲ್ಲಿ ಹುಲಿದಾಳಿಗಳಿಂದ ಮಾನವ ಪ್ರಾಣಹಾನಿಗಳು ಹೆಚ್ಚತೊಡಗಿವೆ. ಬಂಡಿಪುರ, ನಾಗರಹೊಳೆ ಮೊದಲಾದ ಪ್ರದೇಶಗಳನ್ನು ರಾಷ್ಟ್ರೀಯ ಉದ್ಯಾನಗಳೆಂದು, ಅರಣ್ಯ ಪ್ರದೇಶಗಳ ರಕ್ಷಣೆಗಾಗಿ ಇಂತಹ ಯೋಜನೆಗಳೆಂದು.....ಹೇಳಿಕೊಂಡು ನೂರಾರು ವರುಷಗಳಿಂದ ಅಲ್ಲಿ ಬದುಕು ಕಟ್ಟಿಕೊಂಡ ಹಲವಾರು ಮೂಲನಿವಾಸಿ ಜನರನ್ನು ಏಕಾಏಕಿ ನಿರ್ವಸಿತರನ್ನಾಗಿ ಮಾಡಿ ಬಹಳ ವರುಷಗಳಾದವು.
ಇಲ್ಲೆಲ್ಲಾ ಸರಕಾರದ ಇಲಾಖೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಸೇರಿಕೊಂಡು ಹುಲಿ, ಕಾಳಿಂಗ ಹಾವುಗಳನ್ನು ತಂದು ಬಿಡುತ್ತಿರುವ ವರದಿಗಳಿವೆ. ಆನೆಗಳು ಈ ಭಾಗದಲ್ಲಿ ಹೆಚ್ಚಾಗಿ ಓಡಾಟ ಶುರು ಹಚ್ಚಿಕೊಂಡಿರೋದರ ಹಿಂದೆಯೂ ಇಂತಹ ಕಾರಣಗಳು ಇರಬಹುದಾದ ಸಾಧ್ಯತೆಗಳಿವೆ. ಅದು ಜನರ ಮೇಲೆ ಒತ್ತಡ, ಭಯ, ಅಭದ್ರತೆಗಳನ್ನು ಹೆಚ್ಚಿಸುವುದು ಎಂಬುದು ಗೊತ್ತಿರುವ ವಿಚಾರವಲ್ಲವೆ? ಉದ್ಯಾನ ಎನ್ನೋ ಪರಿಕಲ್ಪನೆಯೇ ವಾಣಿಜ್ಯೀಕರಣಕ್ಕೆ ಸಂಬಂದಿಸಿದ್ದಾಗಿದೆ. ವಾಣಿಜ್ಯೀಕರಣದ ಉದ್ದೇಶದ ಯೋಜನೆಗಳನ್ನು ಅರಣ್ಯ ಹಾಗೂ ಅರಣ್ಯ ಪ್ರಾಣಿಗಳ ರಕ್ಷಣೆಯ ಲೇಪ ಹಾಕಿ ವಂಚಿಸುವ ಉದ್ದೇಶದ್ದು ಎಂಬುದನ್ನು ಪರಿಸರಕ್ಕಾಗಿ ಪರಿಸರ, ವಿದೇಶಿ ಹಣಕಾಸು ಪಡೆಯಲೆಂದು ಪರಿಸರ ಕಾಳಜಿಯ, ಪರಿಸರ ಸಂಶೋಧನೆ, ಹುಲಿ ಸಂಶೋಧನೆ, ಕಾಳಿಂಗ ಹಾವು ಸಂಶೋದನೆ ಇತ್ಯಾದಿ ಮುಖವಾಡಗಳಲ್ಲಿ ಹಣ ದೋಚುವ, ವಾಣಿಜ್ಯೀಕರಿಸುವ ಒಳ್ಳೆಯ ಅವಕಾಶಗಳೆಂದು ಮನಗಂಡಿರುವ ಹಲವಾರು ಪರಿಸರ ಕಾಳಜಿ ಹಾಗು ಹೋರಾಟ ವೇಶಧಾರಿಗಳು ಜನರಿಂದ ಮರೆಮಾಚುವ ಕಾರ್ಯವನ್ನು ಮಾಡಿಕೊಂಡು ಬಂದರು. ಮೂಲನಿವಾಸಿ ಜನರನ್ನು ಪರಿಸರ ರಕ್ಷಣೆಗಾಗಿ ತಾವೇ ಕಟ್ಟಿಕೊಂಡ ಬದುಕಿಂದ ತಾವಾಗಿಯೇ ಒಕ್ಕಲೆದ್ದು ತ್ಯಾಗ ಮಾಡಲು ಪ್ರಚಾರ ನಡೆಸಿದರು. ಹಲವಾರು ಕುಟುಂಬಗಳನ್ನು ಬೀದಿಪಾಲು ಮಾಡಲಾಯಿತು. ನೂರಾರು ಕುಟುಂಬಗಳು ನಾಶಗೊಂಡವು. ಹಲವರು ಕಳೆದುಹೋದ ಬದುಕುಗಳ ಬಗ್ಗೆ ಚಿಂತಿಸುತ್ತಾ ಆತ್ಮಹತ್ಯೆ ಮಾಡಿಕೊಂಡರು. ಪರಿಸರ ನಾಶ ಮಾಡುವ, ಒಕ್ಕಲೆಬ್ಬಿಸುವ ವಾಣಿಜ್ಯ ಉದ್ದೇಶದ ಯೋಜನೆಗಳನ್ನು ವಿರೋಧಿಸಿದ ಕಾರಣಕ್ಕೆ ಸುಳ್ಳು ಕೇಸುಗಳು, ಸರಕಾರ, ಅರಣ್ಯ ಇಲಾಖೆ , ಪೊಲಿಸ್ ಇಲಾಖೆಗಳ ದೌರ್ಜನ್ಯ ಹಿಂಸೆಗಳಿಗೆ ಗುರಿ ಮಾಡಲಾಯಿತು. ನೂರಾರು ವರುಷಗಳಿಂದ ಕಷ್ಟಪಟ್ಟು ಶ್ರಮ ವಹಿಸಿ ಕಟ್ಟಿಕೊಂಡುಬಂದ ಬದುಕಿಗೆ ಭದ್ರತೆಯಾಗಲೀ, ರೂಢಿಸಿಕೊಂಡು ಬಂದಿದ್ದ ತುಂಡು ಭೂಮಿಗಳಿಗೆ ಹಕ್ಕು ಪತ್ರ ,ದಾಖಲೆಗಳಾಗಲೀ, ಮೂಲಭೂತ ಸೌಲಭ್ಯಗಳಾಗಲೀ ನೀಡದೇ ನೇರ ಹಾಗೂ ಪರೋಕ್ಷ ಬೆದರಿಕೆ, ಒತ್ತಡ, ಮೂಗು ಬಾಯಿ ಮುಚ್ಚಿ ಉಸಿರು ಕಟ್ಟಿಸುವ ಕುತಂತ್ರ...ಇತ್ಯಾದಿಗಳನ್ನು ಪ್ರಭುತ್ವ ಮತ್ತದರ ಬೆಂಬಲಿಗ ಶಕ್ತಿಗಳು ಮಾಡುತ್ತಾ ಬರುತ್ತಿವೆ. ಮಲೆನಾಡಿನ ಶೃಂಗೇರಿ, ಕೊಪ್ಪ, ಮೂಡಿಗೆರೆ, ಎನ್ ಆರ್ ಪುರ, ಆಗುಂಬೆ., ಕರಾವಳಿ ಬಾಗದ ಸೋಮೇಶ್ವರ, ಕೊಲ್ಲೂರು.. ಭಾಗಗಳಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಭದ್ರಾ ಅಭಯಾರಣ್ಯ, ಮೂಕಾಂಬಿಕಾ ಅಭಯಾರಣ್ಯ, ಮೀಸಲು ಅರಣ್ಯ, ಕಾಳಿಂಗ ಉದ್ಯಾನವನ, ಕಾಳಿಂಗ ಸಂಶೋಧನೆ ಇತ್ಯಾದಿ ಹೆಸರಿನಲ್ಲಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಆ ಭಾಗದ ಜನಸಮೂಹಗಳ ಮೇಲೆ ನೇರ ಹಾಗೂ ಪರೋಕ್ಷ ಬೆದರಿಕೆ, ಒತ್ತಡ, ಮೂಗು ಬಾಯಿ ಮುಚ್ಚುವ ಕುತಂತ್ರಗಳನ್ನು ಹೇರಲಾಗುತ್ತಿದೆ. ಭೂ ದಾಖಲೆಗಳು, ರಸ್ತೆ, ವಿದ್ಯುತ್, ಮನೆ ಮೊದಲಾದ ಮೂಲಭೂತ ವಿಚಾರಗಳನ್ನು ನಿರಾಕರಿಸಲಾಗುತ್ತಿದೆ. ಎಲ್ಲದಕ್ಕೂ ಅರಣ್ಯ ಇಲಾಖೆಯ ಅಂಗೀಕಾರವನ್ನು ಕಡ್ಡಾಯಗೊಳಿಸಲಾಗಿದೆ. ಅರಣ್ಯ ಇಲಾಖೆಯ ಆಕ್ಷೇಪಣೆಗಳು ಎಲ್ಲದಕ್ಕೂ ಮಾಮೂಲಿಯಂತಾಗಿಬಿಟ್ಟಿವೆ. ಅರಣ್ಯ ಇಲಾಖೆಯು ಎಲ್ಲಾ ಇಲಾಖೆಗಳ ಮೇಲುಸ್ತುವಾರಿ ಇಲಾಖೆ ಎಂಬಂತೆ ನೇರ ಹಾಗೂ ಪರೋಕ್ಷ ನೆಪಗಳಿಂದ ಮಾಡಲಾಗಿದೆ. ಇವೆಲ್ಲಾ ಅಪ್ರಜಾತಾಂತ್ರಿಕ ನಡೆಗಳಾಗಿವೆ. ಭೂ ಪ್ರದೇಶಗಳ ಮೇಲೆ ಕಾರ್ಪೋರೇಟುಗಳು ನಿಯಂತ್ರಣ ಹೊಂದಲು ಅವಕಾಶ ಕಲ್ಪಿಸುವ ನೇರ ನಡೆಗಳಾಗಿವೆ. ಜನರನ್ನು ಪರಿಸರ ಅರಣ್ಯ ರಕ್ಷಣೆ ಮೊದಲಾದ ನೆಪಗಳಿಂದ ಒಕ್ಕಲೆಬ್ಬಿಸಿ ಅವೇ ಪ್ರದೇಶಗಳನ್ನು ಭಾರಿ ಕಾರ್ಪೋರೇಟುಗಳಿಗೆ ಗಣಿಗಾರಿಕೆ ಇನ್ನಿತರ ಯೊಜನೆಗಳಿಗೆ ಪರಭಾರೆ ಮಾಡಿದ /ಮಾಡುತ್ತಿರುವ ಬೇಕಾದಷ್ಟು ಉದಾಹರಣೆಗಳು ನಮ್ಮ ಮುಂದಿವೆ.
ಇದೀಗ ಜನರಿಗೆ ಮಂಜೂರಾಗಿರುವ ಕಂದಾಯ ಭೂಮಿಗಳು ಕೂಡ ಅರಣ್ಯವೆಂದು ವಾಪಾಸು ಪಡೆಯುವ ಉದ್ದೇಶದ ಎಸ್ ಐ ಟಿ ರಚಿಸಿ ತನಿಖೆ ನಡೆಸುವ ಕಾರ್ಯ ಆರಂಭವಾಗಿದೆ. ಈ ಹಿಂದೆ ಕಂದಾಯ ಇಲಾಖೆಯ ಅದೀನದಲ್ಲಿ ಇದ್ದ ಅರಣ್ಯ ಪ್ರದೇಶಗಳನ್ನು ಗುರುತಿಸಿ ಅವುಗಳನ್ನು ವಾಪಾಸು ಅರಣ್ಯವೆಂದೇ ಪರಿಗಣಿಸಬೇಕೆಂಬ ಸರ್ವೋಚ್ಚ ನ್ಯಾಯಾಲಯ ತೀರ್ಪೊಂದರ ನೆಪದಲ್ಲಿ ಇದನ್ನು ಮಾಡಲಾಗುತ್ತಿದೆ. ಗಂಭೀರ ವಿಚಾರವೆಂದರೆ ಈಗಾಗಲೆ ಜನರಿಗೆ ಭೂ ಮಂಜೂರಾತಿ ನೀಡಿರುವ ಭೂಮಿಗಳನ್ನು ಕೂಡ ಅರಣ್ಯವೆಂದು ಗುರುತಿಸಿ ವಾಪಾಸು ಪಡೆದು ಜನರನ್ನು ಒಕ್ಕಲೆಬ್ಬಿಸಿ ಬೀದಿಪಾಲು ಮಾಡಬಹುದಾದ ಜನವಿರೋಧಿ ಹಾಗೂ ಪರಿಸರವಿರೋಧಿ ಕ್ರಮಗಳು ಇದಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಗ್ರಹಿಸಬೇಕಿದೆ.
ಮಲೆನಾಡು ಭಾಗದಲ್ಲಿ ಜನವಿರೋಧಿ ಹಾಗೂ ಪರಿಸರ ವಿರೋಧಿ ಅರಣ್ಯ ಯೋಜನೆಗಳ ವಿರುದ್ದ ಆದಿವಾಸಿ ಇನ್ನಿತರ ಜನಸಮೂಹಗಳು ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ಯೋಜನೆಗಳು ಹಾಗು ಜನರ ಒಕ್ಕಲೆಬ್ಬಿಸುವಿಕೆಯನ್ನು ವಿರೋಧಿಸಿ ಕ್ರಾಂತಿಕಾರಿ ನಕ್ಸಲ್ ಹೋರಾಟಗಾರರೂ ಜನಸಮೂಹವನ್ನು ಸಂಘಟಿಸುತ್ತಾ ಬಂದಿದ್ದರು. ಕೆಲವು ತಿಂಗಳುಗಳ ಹಿಂದೆ ಕೆಲವು ನಕ್ಸಲ್ ಹೋರಾಟಗಾರರನ್ನು ಶರಣಾಗತಿಗೊಳಿಸಿ ಹತ್ತಾರು ಪ್ರಕರಣಗಳಡಿ ಕಾರಾಗೃಹಗಳಿಗೆ ತಳ್ಳಿರುವುದು ಕೂಡ ರಾಜ್ಯದಲ್ಲಿ ನಡೆದಿದೆ. ಒಂದು ಕಡೆ ಪರಿಸರ ರಕ್ಷಣೆಯ ಹೆಸರಿನ ಇಂತಹ ಯೋಜನೆಗಳು /ಒಕ್ಕಲೆಬ್ಬಿಸುವಿಕೆಗಳು ನಡೆಯುತ್ತಿದ್ದರೆ. ಪರಿಸರ ಅರಣ್ಯ ಸಂರಕ್ಷಿತ ಪ್ರದೇಶಗಳಲ್ಲಿ ಹತ್ತಾರು/ ನೂರಾರು ಏಕರೆಗಳನ್ನು ಕಾರ್ಪೋರೇಟುಗಳಿಗೆ ಪರಬಾರೆ ಮಾಡುತ್ತಾ ತಾರ ರೆಸಾರ್ಟ್, ತಾರ ಹೋಟೆಲ್, ತಾರ ಜಂಗಲ್ ಲಾಡ್ಜ್ , ಸಫಾರಿ, ರ್ಯಾಫ್ಟಿಂಗ್ ಮೊದಲಾದ ಪ್ರವಾಸೋದ್ದಿಮೆ ಹೆಸರಿನ ವಿಲಾಸಿತನ, ವಸ್ತುಶಃ ಜನವಿರೋಧಿ ಹಾಗೂ ಪರಿಸರ ವಿರೋಧಿ ಯೋಜನೆಗಳನ್ನು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲೇ ಜಾರಿ ಮಾಡುತ್ತಾ ಬರಲಾಗುತ್ತಿದೆ. ಇಲ್ಲೆಲ್ಲಾ ಅತ್ಯಾಧುನಿಕ ಸೌಲಭ್ಯಗಳೆಲ್ಲವೂ ವ್ಯವಸ್ಥೆ ಮಾಡಲಾಗುತ್ತದೆ. ನದಿಪಾತ್ರಗಳು, ನದಿ ದಂಡೆಗಳು, ಕೆರೆಗಳು ಹೀಗೆ ಎಲ್ಲವನ್ನು ಇವುಗಳು ಬೇಕಾಬಿಟ್ಟಿಯಾಗಿ ಬಳಸುತ್ತಾ ಮಲಿನಗೊಳಿಸುತ್ತಾ ಪರಿಸರ ನಾಶ ಮಾಡುತ್ತಾ ಬರಲಾಗುತ್ತಿದೆ. ಇವುಗಳೆಲ್ಲಾ ಸರ್ಕಾರಗಳ ಸರ್ಕಾರಿ ಇಲಾಖೆಗಳ ನೇರ ಬೆಂಬಲದೊಂದಿಗೆ ನಡೆಯುತ್ತಿವೆ ಎನ್ನುವುದನ್ನು ಗ್ರಹಿಸಬೇಕು. ಜೊತೆಗೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಂತಹವುಗಳು ಅಭಿವೃದ್ದಿ ಹೆಸರಿನಲ್ಲಿ ಜಾರಿ ಮಾಡಲಾಗುತ್ತಿವೆ. ಈಗಾಗಲೇ ಜಲಾಶಯಗಳು, ವಿದ್ಯುತ್ ಯೋಜನೆಗಳು ಇತ್ಯಾದಿ ಬೆಂಗಳೂರು ಕೇಂದ್ರಿತ ಅಭಿವೃದ್ದಿ ಹೆಸರಿನಲ್ಲಿ ಜಾರಿಯಾದ ಯೋಜನೆಗಳಿಂದ ಆಗಿರುವ ಹಾಗೂ ಆಗುತ್ತಿರುವ ಜನರು ಜಾಗೂ ಪರಿಸರದ ಮೇಲಿನ ಹಾನಿಗಳ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಬರುತ್ತಲೂ ಇವೆ. ಆಳುತ್ತಾ ಬರುತ್ತಿರುವ ಎಲ್ಲಾ ಸರಕಾರಗಳೂ ಪಕ್ಷ ಭೇಧವಿಲ್ಲದೇ ಇಂತಹ ಜನವಿರೋಧಿ ಹಾಗೂ ಪರಿಸರವಿರೋಧಿ ಕಾರ್ಪೋರೇಟು ಯೋಜನೆಗಳಿಗಾಗಿ ಜನಸಮೂಹಗಳನ್ನು ಬಲಿಪಡೆಯುತ್ತಾ ಬರುತ್ತಿರೋದನ್ನು ಸ್ಪಷ್ಟವಾಗಿ ಗುರುತಿಸಬೇಕಿದೆ.
ಮಲೆನಾಡಿನ ಜನರು ಹಾಗೂ ನೈಜ ಪ್ರಜಾತಂತ್ರ ಹಾಗೂ ಪರಿಸರವಾದಿಗಳು, ನೈಜ ಮಾನವ ಹಕ್ಕು ಕಾರ್ಯಕರ್ತರು ಇಂತಹುವುಗಳ ಮೇಲೆ ತಮ್ಮ ಗಮನ ಕೇಂದ್ರೀಕರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಬಹಳವಿದೆ. ಜನಸಾಮಾನ್ಯರು ಒಗ್ಗೂಡುತ್ತಾ ತಮ್ಮನ್ನು ಹಾಗೂ ನಾಡಿನ ನೆಲಜಲ ಸಂಪತ್ತುಗಳನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.
Email:
nandakumarnandana67@gmail.com
Comments
Post a Comment