Skip to main content

ಮಲೆನಾಡಿನ ರಸ್ತೆ ಅಗಲೀಕರಣವೂ#road widening in malnad#western ghats#corporate#land slides

 

ಮಲೆನಾಡಿನ ರಸ್ತೆ ಅಗಲೀಕರಣವೂ ..

         ಭಾರಿ ಕಾರ್ಪೋರೇಟು ಹಿತಾಸಕ್ತಿಗಳೂ...

                      ನೆರೆ ಪ್ರವಾಹ, ಭೂಕುಸಿತಗಳೂ...

 

                     

ಕಳೆದ ನೂರಾರು ವರುಷಗಳಿಂದ ಮಲೆನಾಡಿನ ಬೆಟ್ಟಗುಡ್ಡಗಳನ್ನು ಸುತ್ತಿ ಬಳಸಿ ಸಾಗುತ್ತಿದ್ದ ಹಲವಾರು ರಸ್ತೆಗಳು ಈಗ ಭಾರಿ ಅಗಲವಾಗತೊಡಗಿವೆ. ಬಿಳಿ ಪಟ್ಟಿಗಳು, ಹಳದಿ ಪಟ್ಟಿಗಳು, ಕಬ್ಬಿಣದ ಬದಿತಡೆಗಳನ್ನು ಪಡೆಯತೊಡಗಿವೆ. 

                       


 ಈ ರಸ್ತೆಗಳು ಮೂಲದಲ್ಲಿ ದಲಿತ ದಮನಿತರು, ಆದಿವಾಸಿಗಳು ನಡೆದು ಕಡಿದು ನಿರ್ಮಿಸಿದ ಕಾಲುದಾರಿಗಳಾಗಿ ಬಹಳ ಕಾಲ ಉಳಿದಿದ್ದವು. ನಂತರ ಜನರು ಚಕ್ಕಡಿ/ಗಾಡಿದಾರಿಗಳಾಗಿ ಮಾಡಿಕೊಂಡಿದ್ದರು. ಕಚ್ಚಾ ರಸ್ತೆಗಳಾಗಿ ನಂತರ ಜಲ್ಲಿರಸ್ತೆಗಳಾಗಿ ನಂತರ  ಡಾಂಬರುಗಳನ್ನು ಕಂಡು ಬಸ್ಸುಗಳು ಓಡಾಡುವ ರಸ್ತೆಗಳಾಗಿ ಮಾರ್ಪಟ್ಟು ಬಹಳ ಕಾಲವಾಗಿದ್ದವು. ನೂರಾರು, ಸಾವಿರಾರು,ಲಕ್ಷಾಂತರ, ಕೋಟ್ಯಾಂತರ ಜನರನ್ನು ಸಂಪರ್ಕಿಸಿ ಬೆಸುಗೆ ಹಾಕುವ, ಪೋಡು ಇಲ್ಲವೇ ಕುಮರಿ ಬೇಸಾಯದಿಂದ ರಾಗಿ, ಭತ್ತ, ಕಾಡುತ್ಪತ್ತಿ, ಮರದ ದಿಮ್ಮಿ, ಕಾಳು ಮೆಣಸು, ಅಡಿಕೆ, ತೆಂಗು, ಏಲಕ್ಕಿ, ಕಾಫಿ, ಕೊಕೊ, ಟಿ, ಇತ್ತೀಚೆಗೆ, ರಬ್ಬರ್ ಗಳನ್ನು ಹೊತ್ತು ಸಾಗಿಸಲು ಒತ್ತಾಸೆಯಾಗಿದ್ದವು. ಜೊತೆಗೆ ತಾವು ನಂಬಿದ ದೈವಗಳನ್ನು ಭೆಟ್ಟಿಯಾಗಲು ಕೂಡ ಇವೇ ದಾರಿ, ರಸ್ತೆಗಳಲ್ಲಿ ಓಡಾಡುತ್ತಾ ಬಂದಿದ್ದರು ಜನರು.                                        


 ಬ್ರಿಟೀಷರು ತಮ್ಮ ಅಕ್ರಮ ಆಳ್ವಿಕೆ ನಡೆಸತೊಡಗಿದ ಮೇಲೆ ತಮ್ಮ ಲೂಟಿಗೆ ಅನುಕೂಲ ಮಾಡಿಕೊಳ್ಳುವ ಸಲುವಾಗಿ ಜನರು ಓಡಾಡಿ ಕಡಿದು ಮಾಡಿದ ದಾರಿಗಳಲ್ಲಿ ಕೆಲವನ್ನು ರಸ್ತೆಗಳನ್ನಾಗಿ ಮಾಡಿ ಡಾಮರು ಸಿಮೆಂಟುಗಳನ್ನು ಹಾಕಿ ಮೋಟಾರು ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಂಡಿದ್ದರು. ಅವುಗಳಲ್ಲಿ ಹಲವು ರಸ್ತೆಗಳು ಬ್ರಿಟೀಷರು ಹೋದ ನಂತರ ಮಲೆನಾಡು ರಾಜ್ಯದ ಇತರ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾಗಿ ಮಾರ್ಪಡಿಸಲಾಗಿತ್ತು. ಮಲೆನಾಡಿಗೆ ರೈಲು ಸಂಪರ್ಕ ಹಾಗೂ ವಾಯುಸಂಪರ್ಕ ಕಡಿಮೆ. ಉಳಿದಂತೆ ಜನಸಾಮಾನ್ಯರ ವಾಸ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಈಗಿನ ಕಾಲಕ್ಕೆ ಹೋಲಿಸಿದಾಗ ಬಹಳ ಹಿಂದುಳಿದ ಸ್ಥಿತಿಗಳಲ್ಲೇ ಈಗಲೂ ಇಡಲಾಗಿದೆ ಎಂದರೆ ಉತ್ಪೇಕ್ಷೆಯಲ್ಲ. ಅಂತಹ ಬಹುತೇಕ ರಸ್ತೆಗಳು ದ್ವಿಚಕ್ರವಾಹನ ಸಂಚಾರ ಯೋಗ್ಯವೂ ಆಗಿಲ್ಲ ಎಂಬುದೇ ವಾಸ್ತವ

 ಆದರೆ ಈಗ ಗುಡ್ಡ ಕಡಿದು, ಮಣ್ಣು ತೆಗೆದು, ಗಿಡಮರಗಳನ್ನು ಉರುಳಿಸಿ, ಭಾರಿ ಹೆದ್ದಾರಿಗಳಂತೆ ಅವೈಜ್ಞಾನಿಕವಾಗಿ ಅಗಲಗೊಳಿಸುತ್ತಿರುವ ರಸ್ತೆಗಳು ಈ ಭಾಗದ ಜನಸಾಮಾನ್ಯರ ನಿತ್ಯಬಳಕೆಯ ಹಳ್ಳಿ, ಕೂಡಿಗೆ, ಮನೆಗಳನ್ನು ಸಂಪರ್ಕಿಸುವ ರಸ್ತೆಗಳಲ್ಲ ಎನ್ನುವುದು ಕೂಡ ಉತ್ಪ್ರೇಕ್ಷೆಯಲ್ಲ. ಬದಲಿಗೆ ಅವೆಲ್ಲವೂ ಪ್ರಧಾನವಾಗಿ ಭಾರಿ ಕಾರ್ಪೋರೇಟುಗಳ ಲೂಟಿಯ ಹಿತಾಸಕ್ತಿಗಳನ್ನು ಪೂರೈಸುವ, ಭಾರಿ ಗುತ್ತಿಗೆದಾರರ ಹಿತಾಸಕ್ತಿಗಳನ್ನು ಪೂರೈಸುವ ಉದ್ದೇಶಗಳನ್ನು ಹೊಂದಿವೆ. ಅದಕ್ಕಾಗಿಯೇ ಸರ್ಕಾರಗಳು ಮುಂದೆ ನಿಂತು ಇವುಗಳನ್ನೆಲ್ಲಾ ಮಾಡಿಸತೊಡಗಿದೆ. ಹಾಗಾಗಿ ಮಲೆನಾಡಿನ ಬಹಳಷ್ಟು ರಸ್ತೆಗಳು ನಾಲ್ಕು ಪಥಗಳ ರಸ್ತೆಗಳ ತರಹ ಕಾಣಿಸತೊಡಗಿವೆ. ಕಾರ್ಪೋರೇಟುಗಳೆಂದಾಗ ಧರ್ಮಸ್ಥಳ, ಶೃಂಗೇರಿ, ಹೊರನಾಡು, ರಂಭಾಪುರಿ, ಸುಬ್ರಹ್ಮಣ್ಯ, ಕೊಲ್ಲೂರುಗಳಂತಹ ಧಾರ್ಮಿಕ ಕಾರ್ಪೋರೇಟುಗಳ ಹಿತಾಸಕ್ತಿಗಳು ಒಂದು ಪ್ರಧಾನ ವಿಚಾರವಾಗಿದೆ. ಇವನ್ನೆಲ್ಲಾ ಮಲೆನಾಡಿನ ಅಭಿವೃದ್ದಿ, ಪ್ರವಾಸೋದ್ದಿಮೆಯ ಅಭಿವೃದ್ಧಿ...ಎಂದೆಲ್ಲಾ ಬಿಂಬಿಸಲಾಗುತ್ತಿದೆ. ಜನಸಾಮಾನ್ಯರನ್ನು ನಂಬಿಸಿ, ಭ್ರಮೆಗಳಲ್ಲಿ ಕೆಡವುವ ಕೆಲಸಗಳು ಜೋರಾಗಿ ನಡೆಯುತ್ತಿವೆ. ಇದಕ್ಕೆಂದೇ ನವವಸಾಹತುಶಾಹಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಭಾರಿ ಸಾಲಗಳನ್ನು ಮಾಡಲಾಗುತ್ತಿದೆ.

 

ಮಲೆನಾಡು, ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ. ಅದನ್ನು ರಕ್ಷಿಸಬೇಕೆಂದು ಹೇಳುತ್ತಾ ರಾಷ್ಟ್ರೀಯ ಉದ್ಯಾನವನ, ರಕ್ಷಿತಾರಣ್ಯ, ಅಭಯಾರಣ್ಯ, ಮೀಸಲು ಅರಣ್ಯ, ಇನಾಮು ಭೂಮಿ ಎಂದೆಲ್ಲಾ ಕರೆದು ಅಲ್ಲಿ ತಲತಲಾಂತರಗಳಿಂದ ಬದುಕು ನಡೆಸುತ್ತಾ ಬಂದ ಆದಿವಾಸಿ, ದಲಿತ ಇನ್ನಿತರ ಜನಸಮೂಹಗಳನ್ನು ಅಲ್ಲಿಂದ ಖಾಲಿ‌ಮಾಡಿಸಿ ಇಡೀ ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ಭೂಪ್ರದೇಶದ ಮೇಲೆ ಸರ್ಕಾರಿ ಹಿಡಿತ ಹೊಂದಿ‌ ನಂತರ ಡಿನೋಟಿಫೇಕೇಷನ್ ಇತ್ಯಾದಿ ಮಾಡಿ, ಪ್ರವಾಸೋದ್ದಿಮೆಯೆಂದೋ, ಪರಿಸರ ಪ್ರವಾಸಿತಾಣವೆಂದೋ, ಪರಿಸರಸ್ನೇಹಿ ಯೋಜನೆಗಳೆಂದೋ ಚೆಕ್ ಡ್ಯಾಂ, ಕಿರುವಿದ್ಯುತ್, ನೀರು ಸರಬರಾಜು, ಸಸ್ಯಪ್ರಭೇದಗಳು ಪ್ರಾಣಿ ಪ್ರಭೇಧಗಳ ರಕ್ಷಣೆ, ಸಾಮಾಜಿಕ ಅರಣ್ಯ ಯೋಜನೆಗಳೆಂದೋ, ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ಪರಿಸರ ರಕ್ಷಣೆ ಎಂದೆಲ್ಲಾ ಹೆಸರಿಸಿ ಭಾರಿ‌ಕಾರ್ಪೋರೇಟುಗಳಿಗೆ ಹಸ್ತಾಂತರಿಸುವ ನೂರಾರು ಯೋಜನೆಗಳನ್ನು ಸರ್ಕಾರಗಳು ಈಗಾಗಲೇ ತಯಾರು ಮಾಡಿ ಇಟ್ಟಿವೆ. ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಅಕೇಷಿಯಾ ಹಾಗೂ ನೀಲಗಿರಿಗಳನ್ನು ಬೆಳೆಸಿ ಮಲೆನಾಡಿನ ಗುಡ್ಡಗಳನ್ನು ಇತರ ಭೂಮಿಗಳನ್ನು ಬರಡು ಮಾಡಿದ್ದಲ್ಲದೆ ಪರಿಸರಕ್ಕೆ ಭಾರಿ ಹಾನಿಗಳನ್ನು ಮಾಡಿಡಲಾಗಿದೆ. ಮಲೆನಾಡಿನ ಮೇಲೆ ಇಂತಹ ಅಕ್ರಮಗಳನ್ನು ಮಾಡಿದ್ದಲ್ಲದೇ ಅದರಡಿಯಲ್ಲಿ ಭಾರಿ ಕಾರ್ಪೋರೇಟುಗಳಿಗೆ ಕಚ್ಚಾ ವಸ್ತುಗಳನ್ನು ಸಾರ್ವಜನಿಕರ ತೆರಿಗೆಯ ಹಣ ವ್ಯಯಿಸಿ ಒದಗಿಸುವ ಕೆಲಸಗಳನ್ನು ಸರ್ಕಾರಗಳು ಮಾಡುತ್ತಾ ಬಂದಿದ್ದವು. ನಂತರ ಇತ್ತೀಚೆಗೆ ನೀಲಗಿರಿ ಅಕೇಷಿಯ ಬೆಳೆಯುವುದನ್ನು ನಿಷೇಧಿಸುವ ಪ್ರಹಸನವನ್ನೂ ಮಾಡಲಾಯಿತು.

    

ಅದೇ ವೇಳೆಯಲ್ಲಿ ಪಶ್ಚಿಮ ಘಟ್ಟ ಹಾಗೂ ಮಲೆನಾಡು ರಕ್ಷಣೆಯ ಭಾರಿ ಕ್ರಮ ಎಂಬಂತೆ ಮಾಧವ ಗಾಡ್ಗೀಳ್ ವರದಿ  ನಂತರ ಅದರ ಸುಧಾರಿತ ರೂಪ ಕಸ್ತೂರಿರಂಗನ್ ವರದಿಯ ತಯಾರಿ ನಂತರ ಈಗ  ಜಾರಿಯ ಬಗ್ಗೆ ಭಾರಿ‌ಕಾರ್ಪೋರೇಟುಗಳು ಹಾಗೂ ಅವುಗಳೇ ಪ್ರಾಯೋಜಿಸುತ್ತಿರುವ ಸರ್ಕಾರಗಳು ಭಾರಿ ಉತ್ಸುಕವಾಗಿವೆ. ಹಲವು ನಗರಕೇಂದ್ರಿತ ಪರಿಸರ ಪ್ರೇಮದ ಸೋಗಿನವರು, ಹಾಗೇನೆ ಕೆಲವು‌ ಪರಿಸರ ಕಾಳಜಿಯ ಮನಸುಗಳೂ ಕೂಡ ಕಸ್ತೂರಿ ರಂಗನ್ ವರದಿಯನ್ನು ಬೆಂಬಲಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಕೂಡ ಮೇಲುನೋಟದಲ್ಲಿ ನೋಡಿದಾಗ ಪರಿಸರ ರಕ್ಷಣೆ, ಜನರ ಅಭಿವೃದ್ಧಿಯ ಕುರಿತಾಗಿ ಆಕರ್ಷಕವಾಗಿ  ಕಾಣಿಸುತ್ತದೆ. ಆದರೆ ಅದನ್ನು ವಾದಸರಣಿ ಹಾಗೂ ಅಂಕಿ ಅಂಶಗಳುಳ್ಳ ಪರಿಸರ ಹಾಗೂ ಜನರ ಮೇಲೆ ಕಾಳಜಿ ಇರುವಂತೆ ಹೆಣೆಯಲಾಗಿದೆ. ಸಾಕಷ್ಟು ನಯವಂತಿಕೆ, ಚಾಕಚಕ್ಯತೆ ಅಲ್ಲಿ ಕೆಲಸ ಮಾಡಿದೆ. ಅದು ಪಶ್ಚಿಮ ಘಟ್ಟದ ಮೇಲೆ ಕಾರ್ಪೋರೇಟು ಹಿಡಿತ ಹೆಚ್ಚಿಸುವ ನಯವಂತಿಕೆ ಹಾಗೂ ನಾಜೂಕಿನ ನಡೆಗಳನ್ನು ಶಿಫಾರಸು ಮಾಡಿದ ವರದಿಯಾಗಿದೆ ಎನ್ನುವುದು ಹಲವು ನೈಜ ಪರಿಸರ ಕಾಳಜಿಯವರಿಗೂ ಕೂಡ ಅರ್ಥವಾದಂತಿಲ್ಲ.  ಆ ವರದಿಯ ಶಿಫಾರಸುಗಳಲ್ಲಿ ಒಟ್ಟಾರೆಯಾಗಿ ಜಾರಿಯಾಗುವುದು ಜನಸಾಮಾನ್ಯರ ವಿರುದ್ಧ ಹಾಗೇನೆ ಭಾರಿ ಕಾರ್ಪೋರೇಟುಗಳ ಪರವಾಗೇನೆ ಎನ್ನುವುದನ್ನು ಅಗತ್ಯವಾಗಿ ಗ್ರಹಿಸಬೇಕಿದೆ.

 ಉದಾಹರಣೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಾವಯವ ಕೃಷಿಗೆ ಮಾತ್ರ ಅವಕಾಶ ನೀಡಬೇಕೆಂದೂ, ಅಲ್ಲಿನ ಜನಸಾಮಾನ್ಯರನ್ನೂ ಪ್ರವಾಸೋದ್ದಿಮೆಯಲ್ಲಿ ಪಾಲುದಾರರನ್ನಾಗಿ ಮಾಡಿ ಅದರ ಲಾಭದಲ್ಲಿ ಪಾಲು ಸಿಗುವಂತೆ ಮಾಡಬೇಕೆಂದು, ಪರಿಸರ ರಕ್ಷಣೆಯಲ್ಲೂ ಅಲ್ಲಿನ ಜನರನ್ನು ಒಳಗೊಳಿಸಿ ಅರಣ್ಯ ರಕ್ಷಣೆಯ ಜವಾಬ್ದಾರಿ ನೀಡಿ, ಅದರ ಲಾಭದ ಪಾಲುದಾರರನ್ನಾಗಿ ಮಾಡಬೇಕು. ಜಾನುವಾರುಗಳನ್ನು ಮನೆಗಳ ಆವರಣಗಳಲ್ಲಿಯೇ ಕಟ್ಟಿ ಸಾಕಬೇಕು... ಹೀಗೆಲ್ಲಾ  ಆ ವರದಿಯಲ್ಲಿ ಹೇಳಲಾಗಿದೆ. ಮೇಲ್ಮಟ್ಟದಲ್ಲಿ ನೋಡಿದಾಗ ಈ ಶಿಫಾರಸುಗಳು ಸರಿಯಲ್ಲವೇ, ಜನರಿಗೂ ಅದರ ಉಪಯೋಗ, ಜನರ ಒಳಗೊಳ್ಳುವಿಕೆ, ಸಾವಯವ ಕೃಷಿಯ ಬೆಳವಣಿಗೆಗೆ ಬಹಳ ಸಹಕಾರಿಯಲ್ಲವೇ ... ಎಂದೆಲ್ಲಾ ಎನಿಸುವುದು ಸಹಜ. ಆದರೆ ಇಂದಿನ ಸಂಧರ್ಭದಲ್ಲಿ ಪ್ರವಾಸೋದ್ದಿಮೆಯೆಂದಾಗ ಅದು ರೆಸಾರ್ಟ್ ಗಳು, ಐಷಾರಾಮಿ ವ್ಯವಸ್ಥೆಗಳು, ಭಾರಿ ಮಟ್ಟದ ಟ್ರಕ್ಕಿಂಗ್... ಇತ್ಯಾದಿ ಎಂದೇ ಅರ್ಥ ಈ ವ್ಯವಸ್ಥೆಗಳನ್ನು ಭಾರಿ ಕಾರ್ಪೋರೇಟುಗಳಲ್ಲದೇ ಸಾಮಾನ್ಯ ಜನರು ಮಾಡಲು ಸಾಧ್ಯವಿಲ್ಲ. ಆರಂಭದಲ್ಲಿ ಮಧ್ಯಮ ಹಾಗೂ ಭಾರಿ ಶ್ರೀಮಂತರುಗಳು ಇದರ ಲಾಭ ಪಡೆದರೂ ಅಂತಿಮವಾಗಿ ಅದು ಸಹಜವಾಗಿ ಭಾರಿ ಕಾರ್ಪೋರೇಟುಗಳು ಸುಲಭವಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಮ್ಮ ಹಿಡಿತವನ್ನು ಪರಿಸರ ರಕ್ಷಣೆಯ ಹೆಸರಿನಲ್ಲೇ ಕಾನೂನಾತ್ಮಕವಾಗಿಯೇ ಸಾಧಿಸುವಂತೆ ಮಾಡುತ್ತದೆ. ಅದೇ ರೀತಿ ಸಣ್ಣಪುಟ್ಟ ಹಿಡುವಳಿದಾರರು ಯಾವುದೇ ಸರಕಾರಿ ಕಾರ್ಯಗತ ಬೆಂಬಲವಿಲ್ಲದೇ ಸಾವಯವ ಕೃಷಿ ಮಾಡಿ ಬದುಕಲು ಸಧ್ಯಕ್ಕೆ ಸಾಧ್ಯವಾಗದ ಮಾತು.

ಅಂತಿಮವಾಗಿ ಸಣ್ಣ ಪುಟ್ಟ ಹಿಡುವಳಿದಾರರ ಭೂಮಿ ಸಾವಯವ ಕೃಷಿ ಮಾಡುವ ನೆಪದಲ್ಲಿ ಭಾರಿ ಕಾರ್ಪೋರೇಟುಗಳು, ದೊಡ್ಡ ಹಿಡುವಳಿದಾರರ ಕೈಗೆ  ಸಹಜವೆಂಬಂತೆ ಹೋಗಿ ಸೇರುತ್ತದೆ. ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ಆದಿವಾಸಿ, ದಲಿತ, ಹಿಂದುಳಿದ ಸಮುದಾಯಗಳು ಇನ್ನಿತರ ಜನಸಮುದಾಯಗಳ ಬಹುಸಂಖ್ಯಾತ ಜನರು ಬದುಕು ಕಳೆದುಕೊಂಡು ಊಹಿಸಲಾಗದ ಸಂಕಷ್ಟಗಳಿಗೆ ಸಿಲುಕುತ್ತಾರೆ. ಪಶ್ಚಿಮ ಘಟ್ಟ ಪ್ರದೇಶ ಊಹಿಸಲಾಗದಷ್ಟು ಅಪಾಯಗಳಿಗೆ ಗುರಿಯಾಗುತ್ತದೆ.


ಅದೆಲ್ಲಾ ಒಂದುಕಡೆ ಇದ್ದರೆ ಈಗ ರಸ್ತೆಗಳನ್ನು ಅನಗತ್ಯವಾಗಿ ಭಾರಿ ಹೆದ್ದಾರಿಗಳ ರೀತಿಯಲ್ಲಿ ಅವೈಜ್ಞಾನಿಕವಾಗಿ ಅಗಲೀಕರಿಸಲು ಸರ್ಕಾರಗಳಿಗೆ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳು ಯಾಕೆ ತಡೆಯಾಗಿ ನಿಲ್ಲುತ್ತಿಲ್ಲ ಎಂಬ ಪ್ರಶ್ನೆಯನ್ನು ಹಾಕಬೇಕಿದೆ. ಅದೇ ವೇಳೆಯಲ್ಲಿ ಜನಸಾಮಾನ್ಯರ ಹಾಡಿ, ಕೂಡಿಗೆ, ಹಳ್ಳಿ, ಮನೆಗಳಿಗೆ ಸಂಪರ್ಕಿಸುವ ರಸ್ತೆ ದಾರಿಗಳಿಗೆ, ಅವರುಗಳ ತುಂಡು ಜಮೀನುಗಳಿಗೆ ಖಾಯಂ ಹಕ್ಕುಪತ್ರ ಒದಗಿಸಲು, ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಶಾಲೆ, ಆಸ್ಪತ್ರೆ, ಕುಡಿಯುವ ನೀರು ಇತ್ಯಾದಿ ಮೂಲಭೂತ ವ್ಯವಸ್ಥೆ ಕಲ್ಪಿಸಲು ಮಾತ್ರ ಯಾಕೆ ಕಸ್ತೂರಿ ರಂಗನ್ ವರದಿಯನ್ನು, ರಾಷ್ಟ್ರೀಯ ಉದ್ಯಾನ, ಮೀಸಲು, ಅಭಯಾರಣ್ಯ, ಹುಲಿ ಯೋಜನೆ ಇತ್ಯಾದಿಗಳನ್ನು ಅಡ್ಡಿಯಾಗಿ ನಿಲ್ಲಿಸಿ ತಡೆಯುತ್ತಿದ್ದಾರೆ ಎನ್ನುವುದರ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತಿಸಬೇಕಾಗಿದೆ.

 

 ಗುಡ್ಡಗಳು ಬೋಳಾಗಿ ಕಾಣತೊಡಗಿವೆ. ಹಿತಕರ ವಾತಾವರಣದ ಜಾಗದಲ್ಲಿ ಬಿಸಿಯೇರುತ್ತಿರುವ ವಾತಾವರಣ, ಅನಾವೃಷ್ಠಿ, ಅತೀವೃಷ್ಟಿ ಈಗ  ಮಲೆನಾಡಿನ  ಮಾಮೂಲಿ ಸಂಗತಿಗಳಾಗಿಬಿಟ್ಟಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರವಾಗತೊಡಗಿದೆ.

    

 

ಈ ಪರಿಸ್ಥಿತಿಗೆ ಅಲ್ಲಿ ಹಲವು ಪೀಳಿಗೆಗಳಿಂದ ವಾಸ ಮಾಡುತ್ತಾ ಬಂದ ಜನಸಾಮಾನ್ಯರು ಪ್ರಧಾನ ಕಾರಣರಲ್ಲ ಎನ್ನುವುದನ್ನು ಸ್ಪಷ್ಟವಾಗಿ ಗ್ರಹಿಸಿದಾಗ ಮಾತ್ರ ನೈಜ ಕಾರಣಗಳತ್ತ ಹೊರಳಿ ಚಿಂತಿಸಲು ಸಾಧ್ಯವಾಗುತ್ತದೆ. ಮಲೆನಾಡಿನ ಇಂತಹ ಪರಿಸ್ಥಿತಿಗೆ ಅರಣ್ಯ ಹಾಗೂ ಪರಿಸರದ ಲೂಟಿಗೆ ಪ್ರಧಾನ ಕಾರಣ ಕರ್ತರು ಸರ್ಕಾರ ಮತ್ತದರ ಆಡಳಿತಾಂಗಗಳು, ಅದರಲ್ಲೂ ಅರಣ್ಯ ಇಲಾಖೆ, ಭಾರಿ ಭೂ ಒಡೆಯರುಗಳು, ಧಾರ್ಮಿಕ ಕಾರ್ಪೋರೇಟುಗಳು  ಭಾರಿ ಕಾರ್ಪೋರೇಟುಗಳು, ಗಣಿಗಾರಿಕೆ, ಕಾಡುತ್ಪನ್ನ ಗುತ್ತಿಗೆದಾರರು, ಕಳ್ಳ ಅರಣ್ಯ ಮಾಫಿಯಾಗಳು ಪ್ರಧಾನ ಕಾರಣ ಕರ್ತರುಗಳಾಗಿದ್ದಾರೆ. ಇದನ್ನು  ಮರೆತು ಮಾತನಾಡುವವರು ಪರಿಸರ ಪ್ರೇಮಿಗಳಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಕೂಡ ನೆನಪಿನಲ್ಲಿ ಇಡಬೇಕು..

 

ಇದರಿಂದಾಗಿ ಮಲೆನಾಡಿನಲ್ಲಿ ಗುಡ್ಡಕುಸಿತಗಳು, ಮಣ್ಣು ಸವಕಳಿ, ನದಿಗಳಲ್ಲಿ ಹೂಳುಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗತೊಡಗಿವೆ. ಅದರ ಪರಿಣಾಮವಾಗಿ ಜನಸಾಮಾನ್ಯರ ಪ್ರಾಣಗಳು ಆಸ್ತಿಪಾಸ್ತಿಗಳು ನಾಶವಾಗತೊಡಗಿವೆ. ಪಶ್ಚಿಮ ಘಟ್ಟ, ಮಲೆನಾಡು ಭೀಕರ ಹಾನಿಗೊಳಗಾಗುತ್ತಾ ಜನಸಾಮಾನ್ಯರ ಬದುಕು ದಿನೇ ದಿನೇ ದುಸ್ತರವಾಗತೊಡಗಿದೆ. ಭತ್ರ, ಅಡಿಕೆ , ಏಲಕ್ಕಿ, ,ತೆಂಗು, ಕಾಫಿ, ಟಿ ಇತ್ಯಾದಿಗಳ ಕೃಷಿಯೂ ಗಂಡಾಂತರಗಳಿಗೆ ಒಳಗಾಗಿವೆ.

 

ಇದು ಕೇವಲ ಪಶ್ಚಿಮ ಘಟ್ಟ ಅಥವಾ ಮಲೆನಾಡಿನ ಜನರು ಹಾಗೂ ಪರಿಸರದ ವಿಚಾರ ಮಾತ್ರ ಅಲ್ಲ. ಇದು ಇಡೀ ಏಷ್ಯಾ, ದೇಶ ಅದರಲ್ಲೂ ದಕ್ಷಿಣ ಇಂಡಿಯಾದ ಜನರು ಹಾಗೂ ಭೌಗೋಳಿಕ ಪರಿಸರದ ಪ್ರಶ್ನೆಯಾಗಿದೆ.

 

೨೭/೦೬/೨೦೨೧.                                  - ನಂದಕುಮಾರ್. ಕೆ. ಎನ್. ಕುಂಬ್ರಿಉಬ್ಬು.

 


 

 

ಮಿಂಚಂಚೆ: nandakumarnandana67@gmail.com

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...