Skip to main content

ಆದಿ ದ್ರಾವಿಡದಿಂದ ಕನ್ನಡದವರೆಗೆ#Adidravida#kannada#makiing history vol 1

 

ಆದಿ ದ್ರಾವಿಡದಿಂದ ಕನ್ನಡದವರೆಗೆ.

 

ಆಂಗ್ಲ ಮೂಲ: ಮೇಕಿಂಗ್ ಹಿಸ್ಟರಿ -ಸಂಪುಟ 1

ಕರ್ನಾಟಕಾಸ್ ಪೀಪಲ್ ಆಂಡ್ ದೆಯರ್ ಪಾಸ್ಟ್

                             -ಸಾಕಿ

ಕನ್ನಡ ರೂಪಾಂತರ- ಡಾ ಆಶೋಕ್ ಕೆ ಆರ್.

-ನಂದಕುಮಾರ್ ಕೆ ಎನ್ ಕುಂಬ್ರಿ ಉಬ್ಬು

 

 

"ಮಾತು ಮತ್ತು ಭಾಷೆಯ ಕಾಲಾನುಕ್ರಮದಲ್ಲಿ ನಾನು ಒಟ್ಟು ಮೂರು ಹಂತಗಳನ್ನು ಗುರುತಿಸಿದ್ದೇನೆ" ಎನ್ನುತ್ತಾರೆ ವಿ.ಪಿ.ಅಲೆಕ್ಸೀವ್.

"ಅ) ಪಿಥೆಕ್ಯಾಂಥ್ರೋಪಸ್ - ಪದಗಳು ವಸ್ತುಗಳ ಅಂಕಿತಗಳಾಗಿದ್ದವು, ಕೆಲವೊಮ್ಮೆ ಮಾತ್ರ ಪದಗಳು ವಾಕ್ಯಗಳಾಗಿ ಮೂಡುತ್ತಿತ್ತು.

ಆ) ನಿಯಾಂಡ್ರಥಾಲ್ ಮನುಷ್ಯನ ಭಾಷೆ - ಇದು ಹೊಸ ಕಾಲಕ್ಕೆ ಹತ್ತಿರವಾದ ಮಾತುಕತೆ, ಸಾಮಾನ್ಯ ವ್ಯಾಕರಣವನ್ನೀಗ ಉಪಯೋಗಿಸಲಾಗುತ್ತಿತ್ತು;

ಇ) ಆಧುನಿಕ ಮನುಷ್ಯನ ಭಾಷೆ - ಆಧುನಿಕ ಭಾಷಾ ವಿಧಾನದ ಪಾಂಡಿತ್ಯವನ್ನು ಪೂರ್ಣವಾಗಿ ಪಡೆಯಲಾಯಿತು, ಭಾಷೆಯ ವಿವಿಧ ರೂಪಾತ್ಮಕ ವಿಂಗಡನೆಗಳ ಅಭಿವೃದ್ಧಿಯಾಯಿತು ಮತ್ತು ಈಗಲೂ ಪದಗಳನ್ನು ವಿಸ್ತರಿಸುವ ಕೆಲಸ ಚಾಲ್ತಿಯಲ್ಲಿದೆ."133

 

ಅಲೆಕ್ಸೀವ್‍‍ನ ವಿಭಾಗೀಕರಣದಿಂದಾಗಿ ಸ್ಪಷ್ಟವಾಗುವ ಅಂಶವೇನೆಂದರೆ ಕರ್ನಾಟಕದಲ್ಲಿ ಮನುಷ್ಯ ವಾಸದ ಮೊದಲ ಕುರುಹುಗಳು ಲಭ್ಯವಾಗುವ ಹೊತ್ತಿಗೆ, ಅಂದರೆ ಆಧುನಿಕ ಮನುಷ್ಯನ ಸಮಯದಲ್ಲಿ ಭಾಷೆಯಾಗಲೇ ಅಭಿವೃದ್ಧಿಯಾಗಿತ್ತು.

 

ಆದರೂ ಪುರಾತನ ಶಿಲಾಯುಗ ಮತ್ತು ನವಶಿಲಾಯುಗದ ಜನರ ಭಾಷೆಯ ಬಗ್ಗೆ ನಾವೊಂದು ಅಸ್ಪಷ್ಟ ನಿಲುವನ್ನಷ್ಟೇ ಹೊಂದಬಹುದು. ಈ ಅಂದಾಜುಗಳೆಲ್ಲವೂ ಅಲೆಮಾರಿತನದ ಗುಣವನ್ನು ಆಧರಿಸಿರಬೇಕಾಗುತ್ತದೆ, ಚಲನಶೀಲತೆಯ ಬಗೆಗಿನ ಪಳೆಯುಳಿಕೆಗಳ ಪುರಾವೆ ಲಭ್ಯವಾಗದೇ ಇದ್ದಲ್ಲಿ ಊಹೆಯಷ್ಟೇ ಉಳಿಯುತ್ತದೆ. ನಾವು ಭಾಷೆಯ ಅಭಿವೃದ್ಧಿಯ ವಿಚಾರವಾಗಿ ಸ್ಟಾಲಿನ್ ಮಾಡಿದ ವಿಭಾಗೀಕರಣವನ್ನು ಅವಲಂಬಿಸಲಿಚ್ಛಿಸುತ್ತೇವೆ. ಬೇಟೆ - ಆಹಾರ ಸಂಗ್ರಹ ಕಾಲದ ಕರ್ನಾಟಕದಲ್ಲಿ ಒಂದಲ್ಲ ಹಲವು ಭಾಷೆಗಳಿದ್ದಿರಬೇಕು - ಕುಲದ ಆಧಾರದ ಮೇಲೆ ಅಥವಾ ಈ ಹಲವು ಭಾಷೆಗಳು ಪ್ರತಿಯೊಂದು ವಿಭಿನ್ನ ಬುಡಕಟ್ಟಿನ ಭಾಷೆಯಾಗಿ ಪರಿವರ್ತಿತವಾಗಿರಬೇಕು.134 ನವಶಿಲಾಯುಗದ ಕಾಲದ ಪ್ರಾರಂಭದೊಂದಿಗೆ ನಾವು ಭಾಷೆಯ ಬಗ್ಗೆ ಒಂದಷ್ಟು ಖಚಿತವಾಗಿ ಮಾತಾಡಬಲ್ಲೆವು.

 

ಇಂಡಿಯಾದ ಅತ್ಯಂತ ಪುರಾತನ ನವಶಿಲಾಯುಗದ ಕಾಲವನ್ನು ಇಂಡಸ್ ಕಣಿವೆಯ ಪಶ್ಚಿಮ ಭಾಗದಲ್ಲಿ ಕಾಣಬಹುದು, ಕ್ರಿಸ್ತಪೂರ್ವ ಎಂಟನೇ ಮಿಲೇನಿಯಂನಲ್ಲಿ. ಆ ಕಾಲಘಟ್ಟದಿಂದ ಬೆಳವಣಿಗೆಯು ಅನಿಯಮಿತವಾಗಿ ಮುಂದುವರೆದಿದೆ. ಕಂಚಿನಯುಗದ ಕಾಲವು ಕ್ರಿಸ್ತಪೂರ್ವ 5000ದಲ್ಲಿ ಪ್ರಾರಂಭವಾಗಿ ಕ್ರಿಸ್ತಪೂರ್ವ 3600ರವರೆಗೆ ಮುಂದುವರೆಯಿತು. ಆರಂಭದ ಹರಪ್ಪ ಹಂತವು ಕ್ರಿಸ್ತಪೂರ್ವ 3600ರಿಂದ 2600ರವರೆಗೆ ಹರಡಿತ್ತು; ಪ್ರಬುದ್ಧ ಹರಪ್ಪ ಕಾಲವು ಕ್ರಿಸ್ತಪೂರ್ವ 2550ರಿಂದ ಕ್ರಿಸ್ತಪೂರ್ವ 1800ರವರೆಗಿತ್ತು. ಇಂಡಸ್ ನಾಗರೀಕತೆಯು ಏಳಿಗೆ ಹೊಂದಿದ್ದು ಕ್ರಿಸ್ತಪೂರ್ವ 2500ರಿಂದ ಕ್ರಿಸ್ತಪೂರ್ವ 1800ರವರೆಗೆ; ಕ್ರಿಸ್ತಪೂರ್ವ 1800ರಿಂದ ಏಳಿಗೆ ಹೊಂದಿದ ಇಂಡಸ್ ನಾಗರೀಕತೆಯು ಕೊನೆಯ ಹರಪ್ಪ ಹಂತದಿಂದ ಕುಸಿತ ಕಾಣಲಾರಂಭಿಸಿತು, ಅದು ವಿವಿಧ ಪ್ರಾದೇಶಿಕ ಸಂಸ್ಕೃತಿಗಳು ಮೂಡಲಾರಂಭಿಸಿದವು.135

 

ನವಶಿಲಾಯುಗ ಕಾಲದಿಂದ ಹಿಡಿದು ಪ್ರಬುದ್ಧತೆಗೊಂಡ ಹರಪ್ಪ ಕಾಲದವರೆಗಿನ ನಿರಂತರವಾಗಿದ್ದ ಅನುಕ್ರಮದ ಆಧಾರದಿಂದ, ಬಲೂಚಿಸ್ತಾನ ಹಾಗೂ ಅದರ ಸುತ್ತಮುತ್ತಲ ಪ್ರದೇಶ, ಇರಾನ್ ಮತ್ತು ಅಫ್ಘಾನಿಸ್ಥಾನದಲ್ಲಿ ಉತ್ತರ ದ್ರಾವಿಡ ಭಾಷೆಯಾದ ಬ್ರಹೂಯಿಯ ಅಸ್ತಿತ್ವ ಮತ್ತು ಕುದುರೆಯ ಯಾವುದೇ ಪಳೆಯುಳಿಕೆಗಳ ಅಲಭ್ಯತೆಯ ಆಧಾರದ ಮೇಲೆ -ಇಂಡಿಯಾದಲ್ಲಿ ಕುದುರೆಗಳನ್ನು ಪರಿಚಯಿಸಿದ್ದು ಆರ್ಯನ್ನರು, ಕ್ರಿಸ್ತಪೂರ್ವ 1900ರಿಂದೀಚೆಗೆ- ಹರಪ್ಪ ನಾಗರೀಕತೆಯು ಆರ್ಯನ್ನೇತರ ನಾಗರೀಕತೆ, ಅಲ್ಲಿನ ಜನರ ಭಾಷೆ ದ್ರಾವಿಡ ಭಾಷೆ ಎಂದು ಆಸ್ಕೋ ಪರ್ಪೋಲಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

 

ಇಂಡಸ್ ಕಣಿವೆಯಲ್ಲಿ ದ್ರಾವಿಡ ಭಾಷೆಯ ಬೆಳವಣಿಗೆ ಶುರುವಾದದ್ದು ಕ್ರಿಸ್ತಪೂರ್ವ 7000ದಲ್ಲಿ ಮತ್ತು ಲಿಪಿಯು ಅಸ್ತಿತ್ವಕ್ಕೆ ಬಂದದ್ದು ಕ್ರಿಸ್ತಪೂರ್ವ 2500ರಲ್ಲಿ ಎಂದು ತೋರುತ್ತದೆ. ವಿವಿಧ ಬುಡಕಟ್ಟು ಭಾಷೆಗಳ ಸಮ್ಮಿಳನದಿಂದ ಆದಿ ದ್ರಾವಿಡ ಭಾಷೆಯು ಮೂಡಿತು ಎಂದು ನಾವು ಭಾವಿಸುತ್ತೇವೆ.

 

ಕ್ರಿಸ್ತಪೂರ್ವ 2500ರ ಸಮಯದಲ್ಲಿ ದಕ್ಷಿಣ ಇಂಡಿಯಾದಲ್ಲಿ ಪಶು ಸಾಕಣೆ - ಆದಿಮ ಕೃಷಿಯ ಹಂತ ಉದ್ಘಾಟಿತಗೊಂಡಂದಿನಿಂದ ಕಾಕತಾಳೀಯವೆಂಬಂತೆ ನವಶಿಲಾಯುಗ ಕಾಲದ ಇಂಡಸ್ ಜನರು ಪರ್ಯಾಯ ದ್ವೀಪ ಪ್ರದೇಶದ ಕಡೆಗೆ ಚಲಿಸಲಾರಂಭಿಸಿದ್ದರು. ಈ ಪ್ರಭಾವದಿಂದಾಗಿ ದಕ್ಷಿಣದಲ್ಲಿ ಪಶು ಸಾಕಣೆ - ಆದಿಮ ಕೃಷಿಯ ನವಶಿಲಾಯುಗ ಹಂತ ಅಭಿವೃದ್ಧಿಯಾಗಿರಬಹುದು. ಆದಿದ್ರಾವಿಡ ಭಾಷೆಯು ಮತ್ತಷ್ಟು ದಕ್ಷಿಣಕ್ಕೆ ಚಲಿಸಿ ತಮಿಳುನಾಡನ್ನು ಪ್ರವೇಶಿಸಿತು. ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಉತ್ತರದ ಸಾಂಸ್ಕೃತಿಕ ಪ್ರಭಾವದ ಚಲನೆಯು ಅಷ್ಟಾಗಿ ಕಾಣಿಸಿಕೊಳ್ಳದ ಪರಿಣಾಮದಿಂದಾಗಿ ದ್ರಾವಿಡ ಕುಟುಂಬದ ಇತರೆ ಭಾಷಾ ಕುಟುಂಬಗಳಿಗೆ ಹೋಲಿಸಿದಾಗ ಆದಿದ್ರಾವಿಡ ಭಾಷೆಯು ತಮಿಳು ಭಾಷೆಯಲ್ಲಿ ಹೆಚ್ಚು ಸಂರಕ್ಷಿಸಲ್ಪಟ್ಟಿದೆ.

 

ಕರ್ನಾಟಕದ ಕೃಷ್ಣ ತುಂಗಾಭದ್ರ ತೀರ ಪ್ರದೇಶದಲ್ಲಿದ್ದ ಮಹಾಶಿಲಾ ಕಾಲದ ಬೇಟೆಗಾರ - ಆಹಾರ ಸಂಗ್ರಹಕಾರರೊಡನೆ ಮೂಲ ದ್ರಾವಿಡ ಭಾಷೆಯು ಸಂಪರ್ಕ ಗಳಿಸಿದ ಪರಿಣಾಮದಿಂದಾಗಿ ದಕ್ಷಿಣ ದ್ರಾವಿಡ ವೈವಿಧ್ಯದ ಭಾಷೆಯು ಕರ್ನಾಟಕದಲ್ಲಿ ಅಭಿವೃದ್ಧಿಗೊಂಡಿತು. ಹರಪ್ಪ ನಾಗರೀಕತೆಯಲ್ಲಿ ಆದಿದ್ರಾವಿಡ ಭಾಷೆಯು ಲಿಪಿಯನ್ನು ಪಡೆಯಲು ಕನಿಷ್ಠ ಐದು ಸಾವಿರ ವರ್ಷಗಳನ್ನು ತೆಗೆದುಕೊಂಡರೆ, ತಮಿಳು ಭಾಷೆಯು 2,300 ವರುಷಗಳಷ್ಟು ಕಾಲ ತೆಗೆದುಕೊಂಡು ಕ್ರಿಸ್ತಪೂರ್ವ 200ರ ಸಮಯದಲ್ಲಿ ಲಿಪಿಯನ್ನು ಪಡೆದುಕೊಂಡಿತು, ಕನ್ನಡ ಭಾಷೆಯು 3,000 ವರುಷಗಳಷ್ಟು ಕಾಲ ತೆಗೆದುಕೊಂಡು ಕ್ರಿಸ್ತಶಕ 430ರ ಸುಮಾರಿಗೆ ಲಿಪಿಯನ್ನು ಅಭಿವೃದ್ಧಿಪಡಿಸಿಕೊಂಡಿತು. ಕ್ರಿಸ್ತಶಕ ಏಳನೇ ಶತಮಾನದಲ್ಲಿ ಲಿಪಿಯನ್ನು ಪಡೆದ ತೆಲುಗು ಮೂರೂವರೆ ಸಾವಿರ ವರ್ಷಗಳಷ್ಟು ಸಮಯ ತೆಗೆದುಕೊಂಡರೆ ಹನ್ನೆರಡನೇ ಶತಮಾನದಲ್ಲಿ ಲಿಪಿ ರೂಪ ಪಡೆದಿರಬಹುದಾದ ಮಲಯಾಳಂ ಭಾಷೆಯು ಲಿಪಿ ವಿಕಸನಕ್ಕೆ ನಾಲ್ಕು ಸಾವಿರ ವರ್ಷ ತೆಗೆದುಕೊಂಡಿತು.136

 

ಆದಿದ್ರಾವಿಡ ಭಾಷೆಯಿಂದ ಬೇರ್ಪಟ್ಟ ಕನ್ನಡವು ಲಿಪಿಯಾಗಿ ಅಭಿವೃದ್ಧಿಯಾಗಲು ಮೂರು ಸಾವಿರ ವರ್ಷಗಳನ್ನು ತೆಗೆದುಕೊಂಡಿರಬಹುದಾದರೂ ಮಾತನಾಡುವ ಭಾಷೆಯಾಗಿ ತನ್ನ ಸ್ವತಂತ್ರ ಅಸ್ತಿತ್ವವನ್ನು ಖಂಡಿತವಾಗಿಯೂ ಬಹಳ ಮುಂಚೆಯೇ ಪಡೆದಿರಲೇ ಬೇಕು. ನವಶಿಲಾಯುಗ ಕಾಲದ ಪ್ರಾರಂಭದಿಂದ ಅಂದರೆ ಪಶು ಸಾಕಣೆ - ಆದಿಮ ಕೃಷಿಯ ಕಾಲಘಟ್ಟದಲ್ಲೇ ಕನ್ನಡ ಭಾಷೆಯು ರೂಪುಗೊಳ್ಳಲಾರಂಭಿಸಿತು ಎನ್ನಬಹುದು.

"ಅನುಕೂಲಾತ್ಮಕ ವಿವರಣೆಗಾಗಿ, ವಿದ್ವಾಂಸರು ಪ್ರಸ್ತುತದಲ್ಲಿರುವ ಎಲ್ಲಾ ದ್ರಾವಿಡ ಭಾಷೆಗಳಿಗೂ ಒಂದು ಕಾಲ್ಪನಿಕವಾಗಿ ತಾಯ್ನುಡಿಯನ್ನು ಮೂಲವಾಗಿಸಿ ಅದನ್ನು ಆದಿದ್ರಾವಿಡ ಭಾಷೆ ಎಂದು ಕರೆದರು. ದ್ರಾವಿಡ ಕುಟುಂಬದ ವಿವಿಧ ಸದಸ್ಯ ಭಾಷೆಗಳನ್ನು ಅವುಗಳ ಭಾಷಾ ವಿಶೇಷತೆಗಳ ಆಧಾರದ ಮೇಲೆ ಮೂರು ಮುಖ್ಯ ವಿಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ - ಅ) ದಕ್ಷಿಣ, ಆ) ಕೇಂದ್ರ ಮತ್ತು ಇ) ಉತ್ತರ ದ್ರಾವಿಡ. ದ್ರಾವಿಡ ಕುಟುಂಬದ ಸದಸ್ಯರ ಪಟ್ಟಿಯಿದು:

i) ದಕ್ಷಿಣ ದ್ರಾವಿಡ ಕುಟುಂಬ: 1. ತಮಿಳು, 2. ಮಲಯಾಳಂ, 3. ಕೋಟಾ, 4. ಕೋಲಾ, 5. ಟೋಡಾ, 6. ಕನ್ನಡ, 7. ತುಳು.

ii) ಕೇಂದ್ರ ದ್ರಾವಿಡ ಕುಟುಂಬ: 8. ತೆಲುಗು, 9. ಗೊಂಡಿ, 10. ಕೊಂಡ, 11. ಪ್ಯೂಗೋ, 12. ಮಂಡ, 13. ಕುಯಿ, 14. ಕುವಿ, 15. ಕೊಲಾಮಿ, 16. ನಾಯ್ಕಿ, 17. ಪರ್ಜಿ ಮತ್ತು 18. ಗಡ್ಭ.

iii) ಉತ್ತರ ದ್ರಾವಿಡ ಕುಟುಂಬ: 19. ಕುರುಕ್, 20. ಮಾಲ್ಟೋ ಮತ್ತು 21. ಬ್ರಹುಯಿ.

 

ದಕ್ಷಿಣ ದ್ರಾವಿಡ ಕುಟುಂಬದಿಂದ ಮೊದಲು ಟಿಸಿಲೊಡೆದು ಹೊರಬಂದದ್ದು ತುಳು ಭಾಷೆ. ಈ ಮುಂಚೆ ತುಳು ಭಾಷೆಯು ಕೇಂದ್ರ ದ್ರಾವಿಡ ಕುಟುಂಬಕ್ಕೆ ಸೇರಿದ್ದು ಎನ್ನಲಾಗುತ್ತಿತ್ತು, ತುಳು ಭಾಷೆಯನ್ನು ದಕ್ಷಿಣ ದ್ರಾವಿಡ ಕುಟುಂಬಕ್ಕೆ ಸೇರಿಸಲು ವಿದ್ವಾಂಸರು ಹಿಂಜರಿಯುತ್ತಿದ್ದರು. ನಂತರ ಮೂಲ ತಮಿಳು - ಕನ್ನಡ ಹಂತದಿಂದ ಬೇರ್ಪಟ್ಟಿದ್ದು ಕನ್ನಡ ಭಾಷೆ. ಈ ರೀತಿಯಾಗಿ ಪ್ರತಿಯೊಂದು ಭಾಷೆಯೂ ಮೂಲ ಭಾಷಾಕುಟುಂಬದಿಂದ ಹೊರಬಂದವು. ಮೇಲಿನ ಪಟ್ಟಿಯಲ್ಲಿ ಈ ರೀತಿ ಹೊರಬಂದ ಭಾಷೆಗಳನ್ನು ಪಟ್ಟಿಯ ಕೊನೆಯಿಂದ ಮೊದಲಿಗೆ ಬರೆಯಲಾಗಿದೆ” ಎಂದು ಕುಶಾಲಪ್ಪ ಗೌಡ ಹೇಳುತ್ತಾರೆ. 137

 

ಇದರ ಬಗ್ಗೆ ಪರ್ಪೋಲಾ ಏನು ಹೇಳುತ್ತಾರೆಂದು ನೋಡೋಣ: "ಆದಿದ್ರಾವಿಡ ತಾಯ್ನುಡಿಯನ್ನು ಮತ್ತೆ ಪುನರ್ ರಚಿಸುವುದು ಸಾಧ್ಯವಿದೆ. ಕಾರಣ ತಮಿಳು ಭಾಷೆಯು ಇತರೆ ದ್ರಾವಿಡ ಭಾಷೆಗಳ ಪ್ರಭಾವಕ್ಕೆ ಒಳಗಾಗಲಿಲ್ಲ, ರಕ್ಷಿಸಲ್ಪಟ್ಟ ತಮಿಳು ಭಾಷೆಯಲ್ಲಿ 2000 ವರ್ಷಗಳಷ್ಟು ಇತಿಹಾಸವಿರುವ ಶ್ರೀಮಂತ ಸಾಹಿತ್ಯಕ ಪರಂಪರೆಯಿದೆ. 1953ರಲ್ಲಿ ಆದಿದ್ರಾವಿಡ ಭಾಷೆಯನ್ನು ಪುನರ್ ರಚಿಸಲು ಫಾದರ್ ಹೆರಾಸ್ ಪಟ್ಟ ಪ್ರಯತ್ನವನ್ನು - ಅವರದರಲ್ಲಿ ಯಶಸ್ಸು ಕಾಣಲಿಲ್ಲ ಎನ್ನುವುದರ ಹೊರತಾಗಿಯೂ - ನಾವು ಗುರುತಿಸಬೇಕು.

 

ಇಂಡಸ್ ಲಿಪಿಗೆ ದ್ರಾವಿಡರು ಕಂಡುಕೊಂಡ ಪರಿಹಾರವು ಹೆಚ್ಚಿನಂಶ ಐತಿಹಾಸಿಕ ಭಾಷಾ ಶಾಸ್ತ್ರಜ್ಞರು ಸೂಚಿಸಿದಂತೆಯೇ ಇರುವ ಸಾಧ್ಯತೆಗಳು ಅಧಿಕ. ಹಾಗಿದ್ದರೂ, ಹಲವು ಶ್ರೇಷ್ಠ ಭಾಷಾಶಾಸ್ತ್ರಜ್ಞರು ಹರಪ್ಪನ್ ಭಾಷೆ ಸಂಪೂರ್ಣವಾಗಿ ಮರೆಯಾಗಿ ಹೋದಂತಹ ಸಾಧ್ಯತೆಗಳನ್ನು ಅಲ್ಲಗೆಳೆಯುವುದಕ್ಕೆ ಇಚ್ಛೆ ಪಡುವುದಿಲ್ಲ. (ಎಮೆನಿಯನ್, 1954; ಬರ್ರೋ 1969)

ಋಗ್ವೇದದಲ್ಲಿರುವ ಅನೇಕ ಶ್ಲೋಕಗಳನ್ನು ಮತ್ತು ವಾಕ್ಯರಚನೆಯ ಶೈಲಿಯನ್ನು ಪಂಜಾಬ್ ಮತ್ತು ಮಧ್ಯದೇಶದಲ್ಲಿ ಕ್ರಿಸ್ತಪೂರ್ವ ಎರಡನೇ ಶತಮಾನದಲ್ಲಿದ್ದ ದ್ರಾವಿಡ ಭಾಷೆಯಿಂದ ಎರವಲು ಪಡೆಯಲಾಗಿದೆ ಎನ್ನುವ ಅಂಶವನ್ನು ಈಗ ಒಪ್ಪಿಕೊಳ್ಳಲಾಗಿದೆ. ಈ ದ್ರಾವಿಡ ಭಾಷಿಕರು ನಿಧಾನಕ್ಕೆ ಇಂಡೋ ಆರ್ಯನ್ ಭಾಷೆಯನ್ನು ಮಾತನಾಡಲಾರಂಭಿಸಿದರು ಮತ್ತು ತಮ್ಮ ಮೂಲ ಭಾಷೆಯನ್ನು ತೊರೆದುಬಿಟ್ಟರು; ಆದರೂ ಈ ಪ್ರಕ್ರಿಯೆಯಲ್ಲಿ ಅವರು ಮಾತನಾಡಲಾರಂಭಿಸಿದ ಹೊಸ ಭಾಷೆಯ ಮೇಲೆ ತಾಯ್ನುಡಿಯು ಪರಿಣಾಮ ಬೀರಿತು.

 

ಮಹಾಶಿಲಾ ಸಂಸ್ಕೃತಿಯ ಆಗಮನ ಮತ್ತು ದಕ್ಷಿಣ ಇಂಡಿಯಾದಲ್ಲಿ ದ್ರಾವಿಡ ಭಾಷಿಕರ ಆಗಮನವು ಒಂದಕ್ಕೊಂದು ನೇರವಾಗಿ ಸಂಬಂಧಪಟ್ಟಿವೆ ಎಂಬ ದೀರ್ಘ ಕಾಲದ ವಾದವನ್ನು ಸಮರ್ಥಿಸಲಾಗದು ಎಂಬುದನ್ನು ನಿರೂಪಿಸಲು ನಾನು ಪ್ರಯತ್ನಪಟ್ಟಿದ್ದೇನೆ. ಇಡೀ ಉಪಖಂಡದಲ್ಲಿ ಲಭ್ಯವಾಗಿರುವ ಪುರಾವೆಗಳು ದ್ರಾವಿಡದ ಮೂಲ ಇಂಡಸ್ ಭಾಷೆಯಲ್ಲಿದೆ ಎಂದು ತೋರಿಸುತ್ತದೆ."138

 

ಈ ರೀತಿಯಾಗಿ ಪರ್ಪೋಲಾ ಕಬ್ಬಿಣ ಯುಗಕ್ಕಿಂತ ಮುಂಚಿತವಾಗಿಯೇ ದಕ್ಷಿಣ ಭಾರತಕ್ಕೆ ದ್ರಾವಿಡ ಭಾಷಿಕರು ಬಂದರು ಎನ್ನುತ್ತಾ ಆ ಕಾಲಘಟ್ಟದ ಹುಡುಕಾಟದಲ್ಲಿದ್ದಾರೆ.

 

ಈ ವಿಷಯದಲ್ಲಿ ಬ್ರಿಡ್ಜೆಟ್ ಮತ್ತು ರೇಮಂಡ್ ಆಲ್ಚಿನ್‍‍ರ ಅಭಿಪ್ರಾಯ ಈ ರೀತಿಯಾಗಿದೆ: "ಮಹಾರಾಷ್ಟ್ರದ ಕೆಲವು ಪ್ರದೇಶಗಳ ಹೆಸರುಗಳ ತಳಹದಿಯಾಗಿ ದ್ರಾವಿಡ ಅಂಶಗಳಿರುವ ಬಗ್ಗೆ ಹೇಳಲಾಗುತ್ತದೆ, ಇದು ಈ ಮುಂಚಿನ ಸಾಂಸ್ಕೃತಿಕ ಹಂತದ ಕಾರಣದಿಂದಾಗಿರಬಹುದು ಎನ್ನುವುದು ನಮ್ಮ ನಿರೀಕ್ಷೆ. ಇದರಿಂದಾಗಿ ನಾವು ಈ ಪ್ರದೇಶದಲ್ಲಿದ್ದ ಮೂಲ ಕೃಷಿಕ ಜನರು ದ್ರಾವಿಡ ಭಾಷೆ ಮಾತನಾಡುತ್ತಿದ್ದರು ಎಂಬ ನಿರ್ಧಾರಕ್ಕೆ ಬರಬಹುದು; ಜೋರ್ವೆ ಸಮಯದಲ್ಲಾದ ಬದಲಾವಣೆಗಳು ಉತ್ತರದ ಇಂಡೋ - ಆರ್ಯನ್ ಭಾಷಿಕರ ವಲಸೆಯೊಂದಿಗೆ ಹೊಂದಿಕೆಯಾಗುತ್ತವೆ. ಈ ಭಾಷೆಯು ಈಗಿನ ಮರಾಠಿ ಭಾಷೆಯ ಮೂಲವಾಗಿರಬೇಕು.

 

ದಕ್ಷಿಣ ದಕ್ಕನ್ನಿನ ಮೊದಲ ನೆಲೆಗಳ ಸಂಸ್ಕೃತಿಯಲ್ಲಿ ಎದ್ದು ಕಾಣುವ ಅಂಶವೆಂದರೆ ಅವುಗಳ ಸ್ವತಂತ್ರ ವಂಶಪರಂಪರೆ. ಮೊದಲ ನೆಲೆಗಳಿಗೂ ನಂತರದ ಜೀವನ ಕ್ರಮಕ್ಕೂ ಒಂದು ಅಸಾಮಾನ್ಯ ನಿರಂತರತೆ ಇದ್ದೇ ಇದೆ. ಈ ಸಂಸ್ಕೃತಿಯು ಯಾವುದಾದರೂ ಬಾಹ್ಯ ಪ್ರೇರಣೆಗೆ ಪ್ರತಿಕ್ರಿಯೆಯಾಗಿ ಮೂಡಿತಾ, ಈ ಬಾಹ್ಯ ಪ್ರೇರಣೆ ಯಾವ ಕಡೆಯಿಂದ ಬಂದಿತು ಎನ್ನುವುದರ ಬಗ್ಗೆ ಇನ್ನೂ ಒಂದು ನಿರ್ಧಾರಕ್ಕೆ ಬರುವುದು ಸಾಧ್ಯವಾಗಿಲ್ಲ. ಒಂದು ಪ್ರಬಲ ಸ್ಥಳೀಯತೆಯಿತ್ತು ಎನ್ನುವ ಸೂಚನೆಗಳಿವೆ.... ಭೌತಿಕ ಸಂಸ್ಕೃತಿಯ ಸ್ವಯಂ ಸಂರಕ್ಷಣೆ ದೀರ್ಘ ಕಾಲದವರೆಗೆ ಪ್ರಭಾವಿಸಿಕೊಂಡಿತ್ತು....

 

ಪ್ರಾರಂಭದ ದ್ರಾವಿಡ ಭಾಷಿಕರು ಪರ್ಯಾಯ ದ್ವೀಪ ಪ್ರದೇಶ ಇಂಡಿಯಾದ ಬರುವಾಗ ತಮ್ಮೊಡನೆ ಕಬ್ಬಿಣ ಮತ್ತು ಮಹಾಶಿಲಾ ಸಮಾಧಿಗಳ ಸಂಸ್ಕೃತಿಯನ್ನು ತಂದರು ಎಂದು ಸಾಧಿಸಲಾಗುತ್ತದೆ, ಇದಕ್ಕೆ ಬಲವಾದ ಆಧಾರಗಳಿಲ್ಲ. ಲಭ್ಯವಿರುವ ಪುರಾತತ್ವಶಾಸ್ತ್ರದ ಪುರಾವೆಗಳ ಆಧಾರದಲ್ಲಿ ಇದು ಅಸಂಭವ ಎಂದು ತೋರುತ್ತದೆ. ಕರ್ನಾಟಕದಲ್ಲಿ ಮತ್ತು ಬಹುಶಃ ಪರ್ಯಾಯ ದ್ವೀಪ ಇತರೆ ಭಾಗಗಳಲ್ಲೂ ಸಹಿತ ಕಬ್ಬಿಣದ ಆಗಮನಕ್ಕಿಂತ ಕನಿಷ್ಠ ಒಂದು ಶತಮಾನಕ್ಕೆ ಮುಂಚೆ ನೆಲೆಗಳು ಅಸ್ತಿತ್ವದಲ್ಲಿದ್ದವು ಎಂದು ನಮಗೆ ತಿಳಿದಿದೆ. ಈ ನೆಲೆಗಳು ಸಂಸ್ಕೃತಿಯು ನಿರಂತರವಾಗಿ ಮುಂದುವರೆಯುತ್ತಿರುವ ಬಗ್ಗೆ ಗುರ್ತಿಸುವಂತಹ ಪುರಾವೆಗಳನ್ನು ಕೊಟ್ಟಿವೆ. ಹಲವಾರು ಆಧುನಿಕ ಸಂಸ್ಕೃತಿಗಳ ಗುಣಗಳನ್ನು ಆ ಕಾಲದ ಸಂಸ್ಕೃತಿಗಳಿಂದ ಪಡೆಯಲಾಗಿದೆ ಮತ್ತು ದೊಡ್ಡ ಪ್ರಮಾಣದ ಜನರ ದೈಹಿಕ ಲಕ್ಷಣಗಳನ್ನು ನವಶಿಲಾಯುಗ ಕಾಲದ ಜನರೊಂದಿಗೆ ಹೋಲಿಸಬಹುದಾಗಿದೆ. ಇವೆಲ್ಲದರ ಆಧಾರದ ಮೇಲೆ ನವಶಿಲಾಯುಗದ ಸಂಸ್ಕೃತಿಯನ್ನು ಪ್ರಾರಂಭಿಸಿದ ಜನರಿಂದಲೇ ದ್ರಾವಿಡ ಭಾಷೆಯೂ ಮೂಡಿಬಂದಿದೆ ಎನ್ನುವುದನ್ನು ನಂಬದೇ ಇರುವುದು ಕಷ್ಟ.

 

ದಕ್ಷಿಣ ಪಥ (ಕಾರಿಡಾರ್) ದುದ್ದಕ್ಕೂ ಬೆಳವಣಿಗೆಗೊಂಡ ಹಲವಾರು ಪ್ರಾದೇಶಿಕ ಸಂಸ್ಕೃತಿಗಳು ಒಂದಕ್ಕೊಂದು ತುಂಬ ಹತ್ತಿರದ ಬಾಂಧವ್ಯವನ್ನಿಟ್ಟುಕೊಂಡಿದ್ದವು ಎನ್ನುವುದರ ಬಗ್ಗೆ ಯಾವುದೇ ಅನುಮಾನಿಸಬೇಕಿಲ್ಲ; ಅವರ ನಡುವೆ ನಿರಂತರವಾಗಿ ಒಂದು ಸಂವಹನವಿತ್ತು ಮತ್ತು ಬಹುಶಃ ಆ ಎಲ್ಲಾ ಭಾಷೆಗಳೂ ಒಂದು ಸಾಮಾನ್ಯ ಭಾಷಾ ಕುಟುಂಬ - ದ್ರಾವಿಡ ಭಾಷಾ ಕುಟುಂಬದಿಂದ ಮೂಡಿಬಂದಿದ್ದವು. ಕರ್ನಾಟಕ, ಮಹಾರಾಷ್ಟ್ರ ಮತ್ತು ದಕ್ಷಿಣದ ಕೇಂದ್ರ ಪ್ರದೇಶದಲ್ಲಿ ಎರಡು - ಮೂರನೇ ಶತಮಾನದಲ್ಲಿದ್ದ ನೆಲೆಗಳು ನಂತರದ ಇತಿಹಾಸ ಕಾಲಘಟ್ಟದ ಪೂರ್ವಜರೇ ಹೌದು ಎನ್ನುವ ವಿಷಯದ ಬಗ್ಗೆ ಹೆಚ್ಚು ಒತ್ತು ಕೊಡುವುದು ಸಾಧ್ಯವಿಲ್ಲ."139

 

ದ್ರಾವಿಡ ಕುಟುಂಬದ ಭಾಷೆಗಳನ್ನು ಪಶು ಸಾಕಣೆಕಾರರ - ಪ್ರಾಚೀನ ಕೃಷಿಕರ ಭಾಷೆಯೆಂದು ಕರೆಯಬಹುದು. ನವಶಿಲಾಯುಗ ಕಾಲದ ಪಶು ಸಾಕಣೆ - ಪ್ರಾಚೀನ ಕೃಷಿಯ ಆಧಾರದ ಮೇಲೆ ದ್ರಾವಿಡ ಕುಟುಂಬದ ಶಾಖೆಗಳು ವಿವಿಧ ಸ್ವತಂತ್ರ ಭಾಷೆಗಳು ಅಭಿವೃದ್ಧಿಯಾದವು. ದ್ರಾವಿಡ ಕುಟುಂಬದ ಯಾವೊಂದು ಭಾಷೆಯೂ ಬೇಟೆ - ಆಹಾರ ಸಂಗ್ರಹಣೆಯ ಸಾಮಾಜಿಕ ತಳಹದಿಯ ಮೇಲೆ ರೂಪುಗೊಂಡಿಲ್ಲ. ಇದೇ ಸಮಯದಲ್ಲಿ ಉತ್ಪಾದನಾ ವಿಧಾನದಲ್ಲಾದ ಬದಲಾವಣೆಯು ಕರ್ನಾಟಕದ ಪುರಾತನ ಶಿಲಾಯುಗದ ಮೇಲುಹಂತ- ಮಧ್ಯಶಿಲಾಯುಗ ಕಾಲಘಟ್ಟದ ಜನರಾಡುವ ಭಾಷೆಯ ಮಾರ್ಪಡುವಿಕೆಗೂ ಕಾರಣವಾಯಿತು. ಹೀಗಾಗಿ ಕನ್ನಡದ ರೂಪುಗೊಳ್ಳುವಿಕೆಯು ನವಶಿಲಾಯುಗ ಕಂಚಿನ ಯುಗ ಕಾಲಘಟ್ಟದಲ್ಲಿ ನಡೆದಿದೆ ಎಂಬ ತೀರ್ಮಾನಕ್ಕೆ ನಾವು ಬರಬಹುದು; ಖಚಿತವಾಗಿ ಕಬ್ಬಿಣ ಯುಗ ಶುರುವಾಗುವುದರೊಳಗೆ ಕನ್ನಡವು ದಕ್ಷಿಣ ದ್ರಾವಿಡ ಕುಟುಂಬದಿಂದ ಸಂಪೂರ್ಣವಾಗಿ ಬೇರ್ಪಟ್ಟು ಸ್ವತಂತ್ರತೆಯನ್ನು ಪಡೆದಿರಲೇಬೇಕು. ಆದಿಮ ಕನ್ನಡವು ಅಭಿವೃದ್ಧಿಯಾಗುವುದರೊಂದಿಗೆ ವಿವಿಧ ಬುಡಕಟ್ಟುಗಳ ಮಧ್ಯಶಿಲಾಯುಗ ಭಾಷೆಗಳು ನಿಧಾನಕ್ಕೆ ಆದಿದ್ರಾವಿಡ ಭಾಷೆಯೊಳಗೆ ಸಮ್ಮಿಲನಗೊಂಡವು. ಆದಿದ್ರಾವಿಡ ಭಾಷೆಯಿಂದ ಬೇರೆ ಆಗಿದ್ದು ಮತ್ತು ವಿವಿಧ ಬುಡಕಟ್ಟು ಭಾಷೆಗಳು ಸಮ್ಮಿಲನಗೊಂಡ ಕಾರಣದಿಂದಾಗಿ ಕನ್ನಡವು ಹುಟ್ಟಲು ಸಾಧ್ಯವಾಯಿತು. ಕಬ್ಬಿಣ ಯುಗದ ಕಾಲದಲ್ಲಿಯೇ ಕನ್ನಡವು ಒಂದಲ್ಲ ಎರಡಲ್ಲ ಹಲವಾರು ಬುಡಕಟ್ಟುಗಳಿಗೆ ಅರ್ಥವಾಗುತ್ತಿದ್ದ ಭಾಷೆಯಾಗಿತ್ತು, ಇದು ಕನ್ನಡ ರಾಷ್ಟ್ರೀಯತೆಯ ಪ್ರಾರಂಭದ ಸಂಕೇತವಾಗಿತ್ತು.140

 

ಕ್ರಿಸ್ತಪೂರ್ವ 237ರಲ್ಲಿ ಮೌರ್ಯನ್ನರ ಸಾಮ್ರಾಜ್ಯವು ದಕ್ಷಿಣಕ್ಕೆ ವಿಸ್ತರಿಸಿತು, ಅದರ ಗಡಿ ತಮಿಳುನಾಡನ್ನು ಪ್ರವೇಶಿಸಲಿಲ್ಲ. ಈ ಕಾರಣದಿಂದಾಗಿ ತಮಿಳು ಭಾಷೆಯು ಸ್ವತಂತ್ರವಾಗಿ ಬೆಳೆಯಲಾರಂಭಿಸಿತು, ಆದರೂ ಅದು ಮೌರ್ಯನ್ನರ ಬ್ರಾಹ್ಮಿ ಲಿಪಿಯನ್ನು ಎರವಲು ಪಡೆದುಕೊಂಡಿತು. ಮೌರ್ಯನ್ನರು (ಕ್ರಿಸ್ತಪೂರ್ವ 322 ರಿಂದ 237) ಮತ್ತು ಶಾತವಾಹನರು (ಕ್ರಿಸ್ತಪೂರ್ವ 240 ರಿಂದ ಕ್ರಿಸ್ತಶಕ 250) ಕರ್ನಾಟಕದಲ್ಲಿ ಆಳ್ವಿಕೆ ನಡೆಸದೇ ಹೋಗಿದ್ದರೆ ಕನ್ನಡ ಕೂಡ ಇನ್ನೂ ಮುಂಚಿತವಾಗಿಯೇ ಲಿಪಿಯ ವಿಕಸನವನ್ನು ಕಾಣುತ್ತಿತ್ತು ಎಂದು ಹೇಳುವುದರಲ್ಲಿ ತಪ್ಪೇನಿಲ್ಲ. ಆ ರೀತಿ ಆಗಿದ್ದರೆ ಕನ್ನಡದ ಉಚ್ಛಾರಣೆಯು ಮತ್ತು ಬರವಣಿಗೆಗಳೆರಡೂ ಬೇಗನೆ ರೂಪುಗೊಂಡು ಕರ್ನಾಟಕ ನಾಗರೀಕತೆಯಾಗಿ ಬೇಗನೆ ಮಾರ್ಪಡುವ ಸಾಧ್ಯತೆ ಇತ್ತು.

::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::::

ಟಿಪ್ಪಣಿಗಳು.

 133. Nikhiles Guha, p 182.

134. Asok Sen, Pp 78-79.

135. BM Rangiah Naidu, p 632.

136. Praxy Fernandes, p 212.

137. Nikhiles Guha, Pp 162-3.

138. Praxy Fernandes, Pp 211-214.

139. Alexander Beatson, Pp 156-157.

140. cited in, Praxy Fernandes, Pp 221-3.

ಆಯ್ದ ಆಕರ ಗ್ರಂಥಗಳು

VP Alexeev, The Origin of the Human Race, Progress Publishers, Moscow, 1986.

FR Allchin, Neolithic Cattle Keepers of South India, A Study of the Deccan

Ashmounds, Cambridge University Press, 1963.

F Raymond Allchin and Dilip K Chakrabarti ed, A Source-Book of Indian Archaeology,

Volume I, Munshiram Manoharlal Publishers, New Delhi, 1979.

 

Bridget and Raymond Allchin, The Rise of Civilisation in India and Pakistan, Select

Book Service Syndicates, New Delhi, 1989.

 

FR Allchin, The Archaeology of Early Historic South Asia, The Emergence of Cities

and States, Cambridge University Press, 1995.

G Ramakrishna, N Gayathri, Debiprasad Chattopadhyaya, An Encyclopaedia of South

Indian Culture, KP Bagchi and Co, Calcutta, 1983.

Edgar Thurston, Ethnographic Notes in Southern India, First Published in 1906,

Reprinted by Asian Educational Services, New Delhi, 1989.

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...