Skip to main content

venezuela -America- sponsored-ನಿಲ್ಲದ ಅಮೇರಿಕ ಪ್ರಾಯೋಜಿತ-ವೆನೆಜುಯೇಲಾ


ನಿಲ್ಲದ  ಅಮೇರಿಕ ಪ್ರಾಯೋಜಿತ ವೆನೆಜುಯೇಲಾ

 ಬವಣೆ

ಸೋಲದ ವೆನೆಜುಯೇಲಾ ಜನತೆ.

ದೊಡ್ಡ ತೈಲ ಸಂಪತ್ತಿನ ರಾಷ್ಟ್ರ ವೆನೆಜುಯೇಲಾ ಕಳೆದ ಕೆಲವು ತಿಂಗಳುಗಳಿಂದ ಕ್ಷೋಭೆಯಲ್ಲಿದೆ. ಕ್ಷೋಭೆಗೆ ಮುಖ್ಯ ಕಾರಣ ವೆನೆಜುಯೇಲಾವಲ್ಲ. ಬದಲಿಗೆ ವಿಶ್ವದ ಲೂಟಿಕೋರ ರಾಷ್ಟ್ರ ಅಮೇರಿಕ ಮತ್ತದರ ಕೂಟ. ಜನರಿಂದ ಚುನಾಯಿತವಾದ ಮದುರೋ ಸರಕಾರವನ್ನು ಉರುಳಿಸಲು ಇನ್ನಿಲ್ಲದ ಬುಡಮೇಲು ಕೃತ್ಯಗಳನ್ನು ಹಾಗೂ ಕಸರತ್ತುಗಳನ್ನು ಅದು ನಡೆಸುತ್ತಲೇ ಇದೆ. ಅಮೇರಿಕದ ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್ ನಂತರ ಬರಾಕ್ ಒಬಾಮಾ ಕಾಲದಿಂದಲೂ ವೆನೆಜುಯೇಲಾದ ಮೇಲೆ ಹೇರಿದ್ದ  ಆರ್ಥಿಕ ನಿರ್ಭಂಧಗಳನ್ನು ತೀವ್ರ ರೀತಿಯಲ್ಲಿ ಹೆಚ್ಚು ಮಾಡುತ್ತಲೇ ಮತ್ತೊಂದು ಕಡೆ ಸಹಾಯದ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರುವ ಕುಟಿಲ ನೀತಿಯನ್ನೂ ಅದು ಅನುಸರಿಸುತ್ತಿದೆ. ಜನರಿಂದ ಆಯ್ಕೆಯಾಗದ ವಿರೋಧ ಪಕ್ಷದ ನಾಯಕನೆಂದು ಹೇಳಿಕೊಂಡಿರುವ  30ರ ಹರೆಯದ ಅಮೇರಿಕದ ಕೈಗೊಂಬೆ ಜುವಾನ್ ಗ್ವಾಯಿಡೋನನ್ನು ಇಟ್ಟುಕೊಂಡು ವೆನೆಜುಯೇಲಾದ ತೈಲ ಸಂಪತ್ತಿನ ಮೇಲೆ ಹಿಡಿತ ಸಾಧಿಸಬೇಕೆಂದು ತಿಣುಕಾಡುತ್ತಿದೆ. ಗ್ವಾಯಿಡೋ ತಾನು ಹಿಂದಿನ ವೆನೆಜುಯೇಲಾದ ಅಧ್ಯಕ್ಷ ಹ್ಯೂಗೋ ಚಾವೇಜ್ ರ ಕಾಲದಲ್ಲಿ  ರಾಷ್ಟ್ರೀಕರಣಗೊಂಡ  ಕಂಪನಿಗಳನ್ನು ಮರಳಿ ಖಾಸಗೀಕರಿಸುತ್ತೇನೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ. ಅದು ರಾಷ್ಟ್ರದ ಅಭಿವೃದ್ದಿಗೆ ಅಗತ್ಯವೆಂದು ಜನರಿಗೆ ನಂಬಿಸುವ ಪ್ರಯತ್ನ ಮಾಡುತ್ತಿದ್ದಾನೆ. ಜೊತೆಗೆ ಈತ ರಾಷ್ಟ್ರ ಎದುರಿಸುತ್ತಿರುವ ಸಂಕಷ್ಟಗಳಿಗೆ  ಸರಕಾರವೇ ಕಾರಣವೆಂದು ಬಿಂಬಿಸಿ ವೆನೆಜುಯೇಲಾ ಜನತೆಯನ್ನು ಚುನಾಯಿತ ಮದುರೋ ಸರಕಾರದ ವಿರುದ್ಧ ಎತ್ತಿಕಟ್ಟಿ ಪ್ರದರ್ಶನ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದಾನೆ.

ಯೂರೋಪಿನ ಜರ್ಮನಿ, ಫ್ರಾನ್ಸ್, ಯುಕೆ ಮೊದಲಾದ ರಾಷ್ಟ್ರಗಳೂ ಕೂಡ ವೆನೆಜುಯೇಲಾದಲ್ಲಿ ‘ಶಾಂತಿಯುತವಾಗಿ ಪ್ರಜಾ ಫ್ರಭುತ್ವ’ ಸ್ಥಾಪಿಸುವ ದೃಷ್ಟಿಯಿಂದ ಅಮೇರಿಕದ  ಇಂತಹ  ಬುಡಮೇಲು ಕೆಲಸಗಳಿಗೆ ಹೆಗಲು ನೀಡಿವೆ. ನೆರೆಯ  ಅರ್ಜೆಂಟೈನಾ, ಬ್ರಜಿಲ್ ,ಕೊಲಂಬಿಯಾ, ಚಿಲಿ, ಈಕ್ವೆಡಾರ್, ಪರಾಗ್ವೆ, ಪೆರು ಮೊದಲಾದ ದಕ್ಷಿಣ ಅಮೇರಿಕದ ರಾಷ್ಟ್ರಗಳ ಅಧ್ಯಕ್ಷರುಗಳು ಸಭೆ ನಡೆಸಿ ವೆನಿಜುಯೇಲಾ ಸಮಸ್ಯೆಗೆ ಪರಿಹಾರ ಕಾಣಲು ತಾವುಗಳು ಸಿದ್ಧವೆಂಬ ಠರಾವು ಮಂಡಿಸಿ ಮದುರೋ ಸರಕಾರವನ್ನು ಉರುಳಿಸುವ ಕಾರ್ಯದಲ್ಲಿ ಜೊತೆಯಾಗಿವೆ.

ಅಮೇರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜಮೈಕಾ ಬಹಮಾಸ್, ಹೈಟಿ, ಡೊಮಿನಿಕನ್ ರಿಪಬ್ಲಿಕ್ ಮೊದಲಾದ ದೇಶಗಳನ್ನು ವೆನಿಜುಯೇಲಾದ ವಿರುದ್ಧ ಎತ್ತಿಕಟ್ಟಿ  ಅಲ್ಲಿ ಶಾಂತಿಯುತ  ‘ಪ್ರಜಾ ತಾಂತ್ರಿಕ’ ಬದಲಾವಣೆಗೆ ತಾನು ಬದ್ದ ಎಂಬ ಸೋಗಲಾಡಿ ಮಾತುಗಳನ್ನು ಆಡಿದ್ದಾರೆ. ಹಲವಾರು ರಾಷ್ಟ್ರಗಳು ಅಮೇರಿಕ ಕುಮ್ಮಕ್ಕಿನಿಂದ  ಗ್ವಾಯಿಡೋನನ್ನು ವೆನುಜಯೇಲಾದ ಮದ್ಯಂತರ ಅಧ್ಯಕ್ಷನೆಂದು ಮಾನ್ಯ ಮಾಡಿವೆ. ಕ್ಯೂಬಾ,  ರಷ್ಯ ಚೀನಾ, ಬೊಲಿವಿಯಾ ಮೊದಲಾದ ರಾಷ್ಟ್ರಗಳು ಅಮೇರಿಕದ ಇಂತಹ ನಡೆಗಳನ್ನು ಖಂಡಿಸಿವೆ. ರಷ್ಯ ಹಾಗೂ ಚೀನಾ ವೆನೆಜುಯೇಲಾದ ಅಂತರಿಕ ವಿಚಾರದಲ್ಲಿ ಮೂಗು ತೂರಿಸಬಾರದು ಎಂದೂ ಅಮೇರಿಕಕ್ಕೆ ಹೇಳಿವೆ. ರಷ್ಯಾ ವೆನೆಜುಯೇಲಾದ ಸರಕಾರಿ ತೈಲ ಕಂಪನಿಗೆ ತಕ್ಷಣದ ಹಣಕಾಸು ಬಿಕ್ಕಟ್ಟನ್ನು ಎದುರಿಸಲು ಸಾಲವನ್ನೂ ನೀಡಿದೆ. ರಷ್ಯಾದ ಹಣಕಾಸು ಹಿತಾಸಕ್ತಿ  ಕೂಡ ವೆನೆಜುಯೇಲಾದಲ್ಲಿ ಇದೆ. ತನ್ನ ಸೈನಿಕ ತುಕಡಿಗಳನ್ನು ವೆನೆಜುಯೇಲಾ ನೆರವಿಗೆ ರಷ್ಯಾ ನಿಯೋಜಿಸಿದೆ ಎಂದು ಹೇಳಲಾಗುತ್ತಿದೆ.

ವಿದೇಶದಲ್ಲಿರುವ ವೆನೆಜಯೇಲಾದ ಆಸ್ತಿ ಪಾಸ್ತಿ ಬ್ಯಾಂಕ್ ಖಾತೆಗಳನ್ನು ಅಮೇರಿಕ ಸ್ತಂಭಿಸಿದೆ. ಅಲ್ಲದೆ ಹಲವಾರು ಆಸ್ತಿಗಳನ್ನು ಏಕ ಪಕ್ಷೀಯವಾಗಿ ಅಂತರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ ಮುಟ್ಟುಗೋಲು ಹಾಕಿಕೊಂಡಿದೆ. ಅಮೇರಿಕ ಅಣತಿಯಂತೆ ಇತರ ಹಲವು ದೇಶಗಳೂ ಇಂತಹ ನಡೆಗಳನ್ನು ಮಾಡಿವೆ. ಕೆಲವನ್ನು ಸ್ವಯಂ ಅಧ್ಯಕ್ಷನೆಂದು ಘೋಷಿಸಿಕೊಂಡಿರುವ ಗ್ವಾಯಿಡೋ ಸುಪರ್ದಿಗೆ ಒಪ್ಪಿಸಿದೆ. ಅಮೇರಿಕದ ಅಣತಿಯಂತೆ ಯೂರೋಪಿನ ರಾಷ್ಟ್ರಗಳು ಇಂತಹ ಕಾರ್ಯಗಳನ್ನು ಮಾಡಿವೆ. ವೆನೆಜುಯೇಲಾದ ತೈಲವನ್ನು ಖರೀದಿಸದಂತೆ ಭಾರತವೂ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಿಗೆ ಅಮೇರಿಕ ತಾಕೀತು ಮಾಡಿದೆ.  ಹಾಗಾಗಿ ವೆನೆಜುಯೇಲಾ ತನ್ನ ತೈಲ ವ್ಯಾಪಾರವನ್ನು  ರಷ್ಯ ಹಾಗೂ ಚೀನಕ್ಕೆ ಹೆಚ್ಚಾಗಿ ಸೀಮಿತಗೊಳಿಸಬೇಕಾಗಿ ಬಂದಿದೆ.

 ವೆನೆಜುಯೇಲಾದ ಕಂಪನಿಗಳೊಂದಿಗೆ ವ್ಯವಹರಿಸುವ ಯಾವುದೇ ಕಂಪನಿಗಳ ಮೇಲೂ ಅಮೇರಿಕ ನಿರ್ಬಂಧ ಹೇರುವ ಬೆದರಿಕೆ ಹಾಕಿದೆ. ಈ ಬೆದರಿಕೆಯನ್ನು ರಷ್ಯಾ, ಚೀನಾ ಕಂಪನಿಗಳು ಮಾನ್ಯ ಮಾಡಿಲ್ಲ.

ಇದೆಲ್ಲದರಿಂದ ವೆನಿಜುಯೇಲಾದ ಆರ್ಥಿಕತೆಗೆ ದೊಡ್ಡ ಪ್ರಮಾಣದ ನಷ್ಟ ಸಂಭವಿಸುತ್ತಿದೆ. ತೈಲ ಉತ್ಪಾದನೆ ಮೊದಲಿಗಿಂತ ಕುಸಿದಿದೆ. ವೆನಿಜುಯೇಲಾ ಹೊಂದಿದ್ದ ವಿದೇಶಿ ಬಾಂಡುಗಳನ್ನು ನಗದಾಗಿ ಪರಿವರ್ತಿಸದಂತೆ ಅಮೇರಿಕ ತಡೆಯೊಡ್ಡಿದೆ. ವೆನಿಜುಯೇಲಾದ ಬ್ಯಾಂಕುಗಳ ಮೇಲೆ ಅಮೇರಿಕ ನಿರ್ಭಂದದ ಪರಿಣಾಮ ಅಂತರಾಷ್ಟ್ರೀಯ ಹಣಕಾಸು ವಹಿವಾಟಿಗೆ ತೊಂದರೆಯುಂಟಾಗಿದೆ.

 ಇದರ ಪರಿಣಾಮ ಅಲ್ಲಿನ ಜನಸಾಮಾನ್ಯರ ಮೇಲೆ ಆಗುತ್ತಿದೆ. ಔಷಧಿಗಳ ಕೊರತೆಯುಂಟಾಗಿದೆ. ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ರೋಗಗಳಿಂದ ಸಾಯುವವರು ಹೆಚ್ಚಾಗಿದ್ದಾರೆ. ಹಣದುಬ್ಬರ ತೀವ್ರ ಹಂತ ತಲುಪುತ್ತಿದೆ. ಸೈನಿಕರು  ಸೇನೆ ತೊರೆದು ಆಶ್ರಯಕ್ಕಾಗಿ ಅಕ್ಕ ಪಕ್ಕದ ರಾಷ್ಟ್ರಗಳಿಗೆ ಹೋಗುತ್ತಿದ್ದಾರೆ ಎಂದೆಲ್ಲಾ ಪಾಶ್ಚಾತ್ಯ ಮಾಧ್ಯಮಗಳು ಹೇಳುತ್ತಿದ್ದರೂ ಅದು ಪೂರ್ತಿ ವಾಸ್ತವವಲ್ಲ. ಈ ವರದಿಗಳಲ್ಲಿ ಬಹುತೇಕವಾಗಿ ಅಮೇರಿಕ ಬೆಂಬಲಿತ ಸುಳ್ಳುವರದಿಗಳೇ ಹೆಚ್ಚಿವೆ.

  ಆರ್ಥಿಕತೆಗೆ ಇದರಿಂದ ಒಂದಷ್ಟು ನಷ್ಟವಾದರೂ ವೆನೆಜುಯೇಲಾ ಬಹಳ ಹಿಂದಿನಿಂದಲೂ ಅಮೇರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ನಿರ್ಭಂಧಗಳನ್ನು ಎದುರಿಸುತ್ತಲೇ ತನ್ನ ಹಿಂದಿನ ಹಿಂದುಳಿದಿರುವಿಕೆಯಿಂದ ಸಾಪೇಕ್ಷವಾಗಿ ಮುಂದುವರೆದು ಜನಸಾಮಾನ್ಯರ ತಲಾ ಆದಾಯ ಹಾಗೂ ಜೀವನ ಮಟ್ಟದಲ್ಲಿ ಏರಿಕೆಯನ್ನು ಸಾಧಿಸಿತ್ತು.

ಅಮೇರಿಕದ ಇಂತಹ ಕುಟಿಲ ತಂತ್ರಗಳು ವೆನೆಜುಯೇಲಾಕ್ಕೆ ಹೊಸತೇನೂ ಅಲ್ಲ. ವೆನೆಜುಯೇಲಾದ ಜನರು ಈ ಹಿಂದೆ ಅಮೇರಿಕ ಪ್ರಾಯೋಜಿತ ಸೇನಾ ಕ್ಷಿಪ್ರ ದಂಗೆಯನ್ನು ಸೋಲಿಸಿ ತಮ್ಮ ರಾಷ್ಟ್ರವನ್ನು ಹಾಗೂ ಸರಕಾರವನ್ನು ರಕ್ಷಿಸಿಕೊಂಡಿದ್ದರು. ಈ ಕ್ಷಿಪ್ರ ದಂಗೆಯಲ್ಲಿ ಅಮೇರಿಕ ಕುಪ್ರಸಿದ್ಧ ಬೇಹುಗಾರಿಕಾ ಸಂಸ್ಥೆ ಸಿ ಐ ಎ ಯ ನೇರ ಕೈವಾಡ ಇತ್ತು. ಹಿಂದಿನ ಅಧ್ಯಕ್ಷ ಹ್ಯೂಗೋ ಚಾವೇಜರನ್ನು ಕೊಲೆ ಮಾಡುವ ಪ್ರಯತ್ನವನ್ನೂ ಅಮೇರಿಕದ ಸಿ ಐ ಎ ಮಾಡಿತ್ತು ಎಂದು ಚಾವೇಜ್ ಸ್ವತಃ ಹೇಳಿಕೊಂಡಿದ್ದರು.. ಹಾಗಾಗಿ ಅಂತಹ ಪ್ರಜ್ಞೆ ಇರುವ ವೆನೆಜುಯೇಲಾ ಜನತೆ ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಸ್ವಯಂ ಪೂರ್ಣ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳಬಲ್ಲರು ಎಂದೂ ಹೇಳಲಾಗುತ್ತಿದೆ. ಮದುರೋ ಅಂತಹ ನಾಯಕತ್ವ ನೀಡಬಲ್ಲರೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಪ್ರಸ್ತುತ ವೆನೆಜಯೇಲಾ ಸೇನೆ ಚುನಾಯಿತ ಮದುರೋ ಸರಕಾರದ ಹಿಡಿತದಲ್ಲಿದೆ.

ಅಮೇರಿಕ ವಿಶ್ವಸಂಸ್ಥೆಯ ಮೂಲಕ ಕೂಡ ವೆನೆಜುಯೇಲಾದ ಮೇಲೆ ನಿರ್ಭಂಧ ಹೇರಿಸಲು ಪ್ರಯತ್ನ ಪಟ್ಟಿತ್ತು. ರಷ್ಯಾ ಹಾಗೂ ಚೀನಾ ವೀಟೋ ಚಲಾಯಿಸಿದ್ದರಿಂದ ಸಫಲವಾಗದೇ ಹೋಯಿತು. ಆದರೆ ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗ ಮದುರೋ ಸರಕಾರ ವಿರೋಧಿಗಳನ್ನು ತೀವ್ರ ದಮನಿಸುತ್ತಾ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿ ಹೇಳಿಕೆ ನೀಡಿದೆ. ಆದರೆ ಗ್ವಾಯಿಡೋ ಅಕ್ರಮವಾಗಿ ಚುನಾಯಿತ ಸರಕಾರವನ್ನು ಪರಿಗಣಿಸದೇ ತನ್ನನ್ನು ತಾನೇ ಮದ್ಯಂತರ ಅದ್ಯಕ್ಷನೆಂಧು  ಘೋಷಿಸಿಕೊಂಡಿರುವುದರ ಬಗ್ಗೆ ವಿಶ್ವಸಂಸ್ಥೆ ಹೇಳಿಕೆ ನೀಡಿದ ಬಗ್ಗೆ ವರದಿ ಕಾಣುತ್ತಿಲ್ಲ. ಅಂತರಾಷ್ಟ್ರೀಯ ಹಣಕಾಸು ನಿಧಿ ಗ್ವಾಯಿಡೋನನ್ನು ಅದೀಕೃತವಾಗಿ ವೆನೆಜುಯೇಲಾದ  ಪ್ರತಿನಿಧಿಯನ್ನಾಗಿ ಪರಿಗಣಿಸುವ ಹಂತದಲ್ಲಿದೆ. ಇವೆಲ್ಲಾ ಅಮೇರಿಕ ಸೇರಿದಂತೆ ಮುಂದುವರೆದ ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳ ತಾಳಕ್ಕೆ  ತಕ್ಕಂತೆ ಕುಣಿಯುವ ನಡೆಗಳು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ .

 ಇದರ ಮದ್ಯೆ ವೆನೆಜುಯೇಲಾದ ವಿದ್ಯುತ್ ಜಾಲದ ಮೇಲೆ ಸೈಬರ್ ಧಾಳಿ ನಡೆಸಿ ಆ ರಾಷ್ಟ್ರದ ವಿದ್ಯುತ್ ಜಾಲವನ್ನು ಸ್ತಂಭಿಸುವ ಪ್ರಯತ್ನಗಳನ್ನು ನಡೆಸಲಾಯಿತು. ಈ ಬುಡ ಮೇಲು ಕೃತ್ಯದ ಹಿಂದೆ ಅಮೇರಿಕವಿದೆ  ಎಂದು ಅಧ್ಯಕ್ಷ ಮದುರೊ ಹೇಳಿದ್ದಾರೆ. ಈ ಧಾಳಿಯಿಂದಾಗಿ ಮೂರು ದಿನಗಳ ಕಾಲ ರಾಷ್ಟ್ರ ದ ಹಲವು ಬಾಗ ಕತ್ತಲಲ್ಲಿ ಇರಬೇಕಾಯಿತು. ನೀರು ಸರಬರಾಜು ವ್ಯವಸ್ಥೆ ಇನ್ನಿತರ ವ್ಯವಸ್ಥೆಗಳು ಕೆಲಸ ನಿರ್ವಹಿಸದ ಪರಿಸ್ಥಿತಿ ಉದ್ಭವಿಸಿತ್ತು. ಆದರೆ ವೆನಿಜುಯೇಲಾ ಸರಕಾರ ಸೈಬರ್ ಧಾಳಿಯಾದ ತಕ್ಷಣವೇ ರಾಷ್ಟ್ರದ ವಿದ್ಯುತ್ ಜಾಲವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ರಾಷ್ಟ್ರದ ಹಲವು ಕಡೆಗಳಲ್ಲಿ ವಿದ್ಯುತ್ ಜಾಲವನ್ನು ಪುನರ್ ಸ್ಥಾಪಿಸಿತು. ಇದೀಗ ರಾಷ್ಟ್ರದ ವಿದ್ಯುತ್ ಜಾಲ ಹೆಚ್ಚೂ ಕಡಿಮೆ ಪುನರ್ ಸ್ಥಾಪನೆಗೊಂಡಿದೆ. ವಿದ್ಯುತ್ ಜಾಲಕ್ಕೆ ಸೇನಾ ರಕ್ಷಣೆ ನೀಡಲಾಗಿದೆ.

 ವಿದ್ಯುತ್ ಜಾಲದ ಮೇಲೆ ದಾಳಿಯ ಬೆನ್ನಲ್ಲೆ ಅದನ್ನು ಬಳಸಿಕೊಂಡು ವಿರೋಧಿ ನಾಯಕ ಗ್ವಾಯಿಡೋ ನೇತೃತ್ವದಲ್ಲಿ ಮದುರೋ ಸರಕಾರದ ವಿರುದ್ಧ ಜನರ ದಂಗೆಯನ್ನು ಸಂಘಟಿಸುವ ಯತ್ನ ನಡೆಯಿತು. ಈ ದಂಗೆಗೆ ವೆನಿಜುಯೇಲಾದ ಹಲವು ಕಾರ್ಪೋರೇಟುಗಳು, ಶ್ರೀಮಂತ ವ್ಯಾಪಾರಸ್ಥರು  ಹಾಗೂ ರಾಷ್ಟ್ರೀಕರಣವನ್ನು ವಿರೋಧಿಸುವ ಬಲ ಶಕ್ತಿಗಳ ಬೆಂಬಲ ಕೂಡ ಇತ್ತು. ವಿರೋಧ ಪಕ್ಷಗಳು ಕೂಡ  ಈ ಶಕ್ತಿಗಳೊಂದಿಗೆ ಸೇರಿಕೊಂಡು ಮದುರೋ ಸರಕಾರವನ್ನು ಉರುಳಿಸಿ ಅಮೇರಿಕದ ಬುಡಮೇಲು ಕೃತ್ಯಗಳಿಗೆ ಕೈ ಜೋಡಿಸಿವೆ. ಈ ಬಲ ಹಾಗೂ ಪೊಳ್ಳು ರಾಷ್ಟ್ರೀಯವಾದಿಗಳೇ ಅಮೇರಿಕದ ದಾಳಗಳಾಗಿ ವೆನಿಜುಯೇಲದ ಹಿತಾಸಕ್ತಿಗಳನ್ನು ಅಡವಿಡುವ ಕೆಲಸಗಳಲ್ಲಿ ತೊಡಗಿವೆ.

 ಇವೆಲ್ಲದರ ಮದ್ಯೆಯೂ ವೆನೆಜುಯೇಲಾದ ಜನರು ಅಮೇರಿಕದ ವಿರುದ್ಧ ನಿಂತು ಹೋರಾಡುತ್ತಿದ್ದಾರೆ. ತಮ್ಮ ದೇಶದಲ್ಲಿ ಅಮೇರಿಕ ನಡೆಸುತ್ತಿರುವ ಹಸ್ತಕ್ಷೇಪಗಳನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಮದುರೋ ಸರಕಾರದ ಪರವಾಗಿ ದೊಡ್ಡ ದೊಡ್ಡ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಅಮೇರಿಕ ವಿರೋದಿ ಬೀದಿ ಪ್ರತಿಭಟನೆಗಳನ್ನು ರಾಷ್ಟ್ರದಾದ್ಯಂತ ನಡೆಸುತ್ತಿದ್ದಾರೆ. ಗ್ವಾಯಿಡೋ ಅಮೇರಿಕ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ವಿರೋಧಿಸುತ್ತಿದ್ದಾರೆ. ಗ್ವಾಯಿಡೋ ತನ್ನ ಬೆಂಬಲಿಗರ ಸಭೆಗಳನ್ನು ನಡೆಸುತ್ತಾ ನಾಗರಿಕ ಸೇವೆ ಹಾಗೂ ಸೇನೆ ಸರಕಾರದ ವಿರುದ್ಧ ನಿಲ್ಲುವಂತೆ ಕೆಲಸ ಮಾಡುತ್ತಿದ್ದಾನೆ. ಆದರೆ ಅದು ಅಷ್ಟಾಗಿ ಫಲ ನೀಡುತ್ತಿಲ್ಲ. 

ಸರಕಾರ ಗ್ವಾಯಿಡೋಗೆ ಇದ್ದ ರಕ್ಷಣಾತ್ಮಕ ಕವಚಗಳನ್ನು ರದ್ದುಗೊಳಿಸಿ ಆತನ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ ಎಂಬ ಸುದ್ಧಿಯಿದೆ. ಆತನ ಮುಖ್ಯ ಸಿಬ್ಬಂದಿಯೊಬ್ಬನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಜಾಗತಿಕ ಬಂಡವಾಳಶಾಹಿ ಅಮೇರಿಕ ಮತ್ತಿತರ ರಾಷ್ಟ್ರಗಳು ತಮ್ಮ ಕುಸಿಯುತ್ತಿರುವ ಅರ್ಥ ವ್ಯವಸ್ಥೆಯನ್ನು ಹಿಡಿದಿಟ್ಟುಕೊಳ್ಳಲು ಎಲ್ಲಾ ಅಂತರಾಷ್ಟ್ರೀಯ ಕಾನೂನುಗಳು ಹಾಗೂ ಒಪ್ಪಂದಗಳನ್ನೂ ಉಲ್ಲಂಘಿಸುತ್ತವೆ. ಜಗತ್ತಿನ ಯಾವುದೇ ರಾಷ್ಟ್ರದ ಸಂಪತ್ತಾನ್ನಾದರೂ ಲೂಟಿ ಹೊಡೆಯಲು ಎಂತಹ ಕ್ರಮಗಳಿಗಾದರೂ ತೊಡಗುವುದು ಮಾಮೂಲಿ ವಿಚಾರ. ಅಲ್ಲಿ ಯಾವ ಪ್ರಜಾ ಪ್ರಭುತ್ವ ಸ್ಥಾಪನೆಯ ಉದ್ದೇಶವಾಗಲೀ ಜನಸಾಮಾನ್ಯರ ಹಿತ ರಕ್ಷಣೆಯಾಗಲೀ ಇರುವುದಿಲ್ಲ. ವಿಶ್ವಸಂಸ್ಥೆಯಾಗಲೀ ಇನ್ನಿತರ ಅಂತರಾಷ್ಟ್ರೀಯ ಸಂಘಟನೆಗಳಾಗಲೀ ಅಮೇರಿಕ ಮತ್ತದರ ಮಿತ್ರ ರಾಷ್ಟ್ರಗಳ ಬೆಂಬಲಕ್ಕೆ ನಿಂತುಬಿಡುತ್ತವೆ. ಇದಕ್ಕೆ ಇರಾಕ್, ಲಿಬಿಯಾದಂತಹ ಉದಾಹರಣೆಗಳು ಸಾಕಷ್ಟಿವೆ. ಅಮೇರಿಕದ ತಾಳಕ್ಕೆ ಜಗತ್ತಿನ ಎಲ್ಲಾ ಜನರು ಹಾಗೂ ಸರಕಾರಗಳು ಕುಣಿಯಬೇಕೆಂಬುದೇ ಅದರ ನೀತಿಯಾಗಿದೆ. ವೆನೆಜುಯೇಲಾ ವಿಚಾರದಲ್ಲಿ ಸೈನಿಕ ಕಾರ್ಯಾಚರಣೆ ಸೇರಿದಂತೆ ಎಲ್ಲಾ ಕ್ರಮಗಳ ಬಗ್ಗೆಯೂ ಮುಕ್ತವಾಗಿಟ್ಟಿದ್ದೇವೆ  ಎಂದು ಡೊನಾಲ್ಡ್ ಟ್ರಂಪ್ ಈಗಾಗಲೇ ಹೇಳಿದ್ದರೂ ಅದು ಅಷ್ಟು ಸುಲಭದ ವಿಚಾರವಾಗಿ ಉಳಿದಿಲ್ಲ. ಆದರೆ ಆರ್ಥಿಕ ಯುದ್ಧ ಒಂದಷ್ಟು ಕಾಲ ಮುಂದುವರೆಯಬಹುದು. ಜಗತ್ತಿನ ಎಲ್ಲಾ ಜನಸಾಮಾನ್ಯರು ಅಮೇರಿಕ ಮಿತ್ರ ಕೂಟಗಳ ಇಂತಹ  ಅಕ್ರಮಗಳ ಬಗ್ಗೆ  ಹೆಚ್ಚು ಜಾಗೃತೆಯಿಂದ ಇರಬೇಕಾಗಿದೆ.
                                                                                    -ನಂದಕುಮಾರ್ ಕೆ .ಎನ್
14/04/2019                                                                 ಕುಂಬ್ರಿ ಉಬ್ಬು –ಕೊಪ್ಪ  577126

ನಂದಕುಮಾರ್ ಕೆ. ಎನ್‌     ಮಿಂಚಂಚೆ: nandakumarnandana67@gmail.com

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...