ವಸಾಹತುಶಾಹಿ ಕೈಗೊಂಬೆ ಮೈಸೂರು ಒಡೆಯರು ಹಾಗೂ ಬ್ರಿಟೀಷ್ ಆಡಳಿತದಲ್ಲಿ ನಡೆದ ರೈತಾಪಿ ಬಂಡಾಯಗಳು -1 ಆಂಗ್ಲ ಮೂಲ: ಮೇಕಿಂಗ್ ಹಿಸ್ಟರಿ -ಸಂಪುಟ 2 ಕರ್ನಾಟಕಾಸ್ ಪೀಪಲ್ ಆಂಡ್ ದೆಯರ್ ಪಾಸ್ಟ್ -ಸಾಕಿ ಕನ್ನಡ ರೂಪಾಂತರ- ಡಾ ಆಶೋಕ್ ಕೆ ಆರ್. -ನಂದಕುಮಾರ್ ಕೆ ಎನ್ ಕುಂಬ್ರಿ ಉಬ್ಬು ನಗರದ ರೈತಾಪಿ ಬಂಡಾಯ ( 1830 - 33) ಅ. ವ್ಯಾಪಕ ಬಂಡಾಯ 1830 - 33 ರ ಸಮಯದಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ರೈತಾಪಿ ಗಳ ವ್ಯಾಪಕ ಬಂಡಾಯವೆದ್ದಿತು. ಇದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡಿದ್ದ ನಗರ ಫೌಜುದಾರಿಯಲ್ಲಿ ತೀವ್ರವಾಗಿದ್ದ ಕಾರಣದಿಂದಾಗಿ ನಗರ ರೈತಾಪಿ ಬಂಡಾಯ ಎಂದು ಖ್ಯಾತವಾಯಿತು. ಇದೇ ಸಮಯದಲ್ಲಿ ಇತರೆ ಜಿಲ್ಲೆಗಳಿಗೂ ಸಶಸ್ತ್ರ ಹೋರಾಟ ಹಬ್ಬಿತ್ತು. ಉತ್ತರ ಕನ್ನಡ , ಚಿತ್ರದುರ್ಗ , ತುಮಕೂರು , ಹಾಸನ , ಮೈಸೂರು , ಮಂಡ್ಯ ಮತ್ತು ಬೆಂಗಳೂರಿನಲ್ಲಿ ಸಶಸ್ತ್ರ ಹೋರಾಟ ನಡೆದಿತ್ತು. ಹಿಂಸಾತ್ಮಕ ರೂಪವನ್ನಿನ್ನೂ ಪಡೆಯದ ಜನ ಸಮೂಹದ ಹೋರಾಟಗಳು ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನಡೆದಿದ್ದವು. ರಾಯಚೂರು ಮತ್ತು ಧಾರವಾಡ ಜಿಲ್ಲೆಗಳು ವಿವಿಧ ರೂಪಗಳಲ್ಲಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಿದವು. ಧಾರವಾಡದ ಉತ್ತರ ಭಾಗದಲ್ಲಿ ಸಂಗೊಳ್ಳಿ ರಾಯಣ್ಣನ ನೇತೃತ್ವದಲ್ಲಿ ಬಂಡಾಯ ನಡೆದಿದ್ದರೆ , ದಕ್ಷಿಣದ ಭಾಗಗಳು ಆ ಬಂಡಾಯಕ್ಕೆ ಕೈಲಾದ ಸಹಾಯವನ್ನು ಮಾಡಿದವು. ಹಾಗಾಗಿ ನಗರದ ರೈತಾಪಿ ಬಂಡಾಯ ಬಹುಶಃ ಕ...