ಬೀದಿಗಿಳಿದ ಜನಸಾಮಾನ್ಯರು ಪರಿಹಾರವಾಗದ ರೈತರ ಸಂಕಷ್ಟಗಳು! ಇಂಡಿಯಾದ ಬೀದಿಗಳು ಇಂದು ಮಹಿಳೆಯರ, ಅಲ್ಪಸಂಖ್ಯಾತರ, ವಿದ್ಯಾರ್ಥಿಗಳ, ಬುದ್ದಿಜೀವಿಗಳ ಹೋರಾಟಗಳು, ಘೋಷಣೆಗಳಿಂದ, ಭಿತ್ತಿಪತ್ರಗಳಿಂದ ತುಂಬಿಹೋಗಿದೆ. ನಗರ, ಜಿಲ್ಲಾ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಪ್ರತಿಭಟನೆಗಳು, ಸಮಾವೇಶಗಳು ನಡೆಯಲಾರಂಭಿಸಿವೆ. ಕಾಶ್ಮೀರ ಪಂಜಾಬ್, ಈಶಾನ್ಯದ ರಾಜ್ಯಗಳು, ದೆಹಲಿ, ಉತ್ತರಪ್ರದೇಶ, ಬಿಹಾರಗಳಿಂದ ಹಿಡಿದು ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಒಡಿಸ್ಸ ಪಶ್ಚಿಮಬಂಗಾಳ, ಹೀಗೆ ದೇಶದ ಎಲ್ಲೆಡೆಯೂ ಪೌರತ್ವ ಕಾಯಿದೆಗಳನ್ನು ವಿರೋಧಿಸಿ ಚಾರಿತ್ರಿಕ ರೀತಿಯ ಹೋರಾಟಗಳು ನಡೆಯುತ್ತಿವೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸರಕಾರ ಮತ್ತದರ ಪಡೆಗಳ ವ್ಯಾಪಕ ಕಿರುಕುಳಗಳು, ದಮನಕಾಂಡಗಳು, ಹಿಂಸಾಚಾರಗಳು, ಕಗ್ಗೊಲೆಗಳ ನಡುವೆಯೂ ಈ ಹೋರಾಟ ನಿರಂತರತೆಯನ್ನು ಕಾಪಾಡುತ್ತಾ ವ್ಯಾಪಕಗೊಳ್ಳುತ್ತಾ ಹೋಗುತ್ತಿರುವುದು. ಇದು ಸ್ವಾತಂತ್ರ್ಯ ಹೋರಾಟ ನಂತರದ ದಶಕಗಳಲ್ಲೇ ವಿರಳವಾದ ಸಾಮಾಜಿಕ ವಿದ್ಯಮಾನವಾಗಿದೆ. ಹೊಸ ರೀತಿಯ ಹೋರಾಟ ರೂಪ ಶಾಹೀನ್ ಭಾಗ್ ಗಳು ದೇಶದ ಹಲವೆಡೆಗಳಲ್ಲಿ ಆರಂಭವಾಗುತ್ತಾ ಮುನ್ನೆಡೆಯುತ್ತಲಿವೆ. ಈ ಮಧ್ಯೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ, ರಾಷ್ಟ್ರದ್ರೋಹದ ಪ್ರಕರಣಗಳನ್ನಾಗಿ ಮಾಡುವ ಕಾರ್ಯಗಳು ನಡೆಯುತ್ತಲೇ ಇವೆ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಕವಿಗಳು,...